ಕೊಲಂಬೊ : ಬೀದಿಗಳಲ್ಲಿ ಅಳವಡಿಸಿದ್ದ ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಿರುವುದನ್ನು ಖಂಡಿಸಿರುವ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ತಮ್ಮ ಸಹೋದರರೂ ಆಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನವೆಂಬರ್ 29 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಅದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಈ ಹೀನ ಕೃತ್ಯ ಎಸಗಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಿದವರನ್ನು ಪತ್ತೆ ಹಚ್ಚಿ ಶೀಘ್ರದಲ್ಲಿಯೇ ಬಂಧಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೋಟಬಯ ಅವರ ಭಾರತ ಪ್ರವಾಸಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ತಮಿಳು ಭಾಷೆಯ ನಾಮಫಲಕಗಳನ್ನು ವಿರೂಪಗೊಳಿಸಲಾಗಿದೆ. ಒಂದೇ ಗುಂಪಿನವರು ಈ ಕೃತ್ಯವೆಸಗಿದ್ದಾರೆ ಎಂದು ಪ್ರಧಾನಿ ರಾಜಪಕ್ಸೆ ಅವರು ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎಂದು ‘ಡೇಲಿ ಮಿರರ್’ ವರದಿ ಮಾಡಿದೆ.
ತಮಿಳು ಭಾಷಿಕರು ಹಾಗೂ ಸರ್ಕಾರದ ನಡುವೆ ವೈಮನಸ್ಸು ಹುಟ್ಟಿಸಲು ಹಾಗೂಶ್ರೀಲಂಕಾ ಮತ್ತು ಭಾರತದ ನಡುವಿನ ಒಪ್ಪಂದದಲ್ಲಿ ಹುಳಿ ಹಿಂಡಲು ಈ ಗುಂಪು ಯತ್ನಿಸಿದೆ ಎಂದು ಹೇಳಿರುವ ಅವರು, ಈ ನಾಮಫಲಕಗಳನ್ನು ಪುನರ್ ಅರಳವಡಿಸಬೇಕು ಎಂದು ಸೂಚಿಸಿದ್ದಾರೆ.