ಬೆಂಗಳೂರು: ಏಪ್ರಿಲ್ ಮತ್ತು ಮೇನಲ್ಲಿ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗೆ ಬಹುತೇಕ ಎಲ್ಲ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿವೆ. ಸಾಮಾಜಿಕ ಮಾಧ್ಯಮಗಳು ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವೇದಿಕೆಗಳಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನಾನೂ ಸಹ ಕಾವಲುಗಾರ(ಮೈ ಭೀ ಚೌಕೀದಾರ್) ಪ್ರಚಾರದ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
'ನಿಮ್ಮ ಕಾವಲುಗಾರ ಸದೃಢನಾಗಿ ನಿಂತು ದೇಶ ಸೇವೆಯಲ್ಲಿ ತೊಡಗಿದ್ದಾನೆ’ ಎಂಬ ಸಾಲುಗಳೊಂದಿಗೆ ವಿಡಿಯೊ ಪ್ರಕಟಿಸಿಕೊಂಡಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾವಲುಗಾರನೇ ಕಳ್ಳ(ಚೌಕಿದಾರ್ ಚೋರ್ ಹೈ)ಎಂದು ಆಗಾಗ್ಗೆ ಚೇಡಿಸುತ್ತಿರುತ್ತಾರೆ.
Your Chowkidar is standing firm & serving the nation.
— Narendra Modi (@narendramodi) March 16, 2019
But, I am not alone.
Everyone who is fighting corruption, dirt, social evils is a Chowkidar.
Everyone working hard for the progress of India is a Chowkidar.
Today, every Indian is saying-#MainBhiChowkidar
'ಆದರೆ, ನಾನು ಏಕಾಂಗಿಯಲ್ಲ. ಭ್ರಷ್ಟಾಚಾರದ ವಿರುದ್ಧ, ಸಾಮಾಜಿಕ ಕೆಡಿಕಿನ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬರೂ ಕಾವಲುಗಾರ. ಭಾರತದ ಉನ್ನತಿಗಾಗಿ ಪರಿಶ್ರಮವಹಿಸಿರುವ ಪ್ರತಿಯೊಬ್ಬರೂ ಕಾವಲುಗಾರ’ ಎಂದು ಮೋದಿ ಟ್ವೀಟಿಸಿದ್ದಾರೆ.
ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮುದ್ರಾ ಯೋಜನೆ, ಉಜ್ವಲ ಯೋಜನೆ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಹಲವು ಯೋಜನೆ, ಕಾರ್ಯಕ್ರಮಗಳ ಕುರಿತ ಸಾಲುಗಳನ್ನು ವಿಡಿಯೊ ಒಳಗೊಂಡಿದೆ. ಮಾರ್ಚ್ 31ರಂದು ಮೈ ಭೀ ಚೌಕಿದಾರ್ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಜನರನ್ನು ಕೇಳಲಾಗಿದೆ.
ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿ, 'ಐದು ವರ್ಷಗಳ ಹಿಂದೆ ಚೌಕಿದಾರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದಿದ್ದರು. ’ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ’ ಮಾಡುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ, ಇಂದು ಅಚ್ಛೇ ದಿನ್ ಆಯೇಗಾಘೋಷಣೆ ಚೌಕಿದಾರ್ ಚೋರ್ ಹೈಆಗಿ ಬದಲಾಗಿದೆ’ ಎಂದಿದ್ದರು.
ಚೋರ್ಯಾವಾಗಲೂ ತನ್ನ ಹಾದಿಯಿಂದ ಚೌಕಿದಾರ ಇಲ್ಲದಂತೆ ಕಾಣಲು ಹಂಬಲಿಸುತ್ತಿರುತ್ತಾನೆ ಎಂದು ಪ್ರಧಾನಿ ಮೋದಿ ಜನವರಿಯಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ಗೆ ಮಾತಿನ ಬಾಣ ಹಿಂದಿರುಗಿಸಿದ್ದರು.
ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.