ಚಂಡೀಗಡ: 1984ರಲ್ಲಿ ಸಿಖ್ ವಿರೋಧಿ ಗಲಭೆಯಲ್ಲಿ ಸಾವನ್ನಪ್ಪಿದ ಸಂತ್ರಸ್ತ ಕುಟುಂಬಸ್ಥರಿಗೆ ನ್ಯಾಯಕೋರಿ ಪಂಜಾಬ್ನ ವಿರೋಧ ಪಕ್ಷ ಶಿರೋಮಣಿ ಅಕಾಲಿದಳ ಪಕ್ಷ (ಎಸ್ಎಡಿ) ಶನಿವಾರ ನವದೆಹಲಿಯಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಎಸ್ಎಡಿ ಅಧ್ಯಕ್ಷ ಸುಖ್ಬೀರ್ಸಿಂಗ್ ಬಾದಲ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರಾಜಕೀಯ ಗಿಮಿಕ್ ಎಂದು ಪಂಜಾಬ್ನ ಆಡಳಿತರೂಢಾ ಕಾಂಗ್ರೆಸ್ ತಿರುಗೇಟು ನೀಡಿದೆ.
‘1984ರಲ್ಲಿ ನವೆಂಬರ್ 1ರಿಂದ 4ರ ತನಕ ನವದೆಹಲಿ ಮತ್ತು ಇತರ ಸ್ಥಳಗಳಲ್ಲಿ ಕಾಂಗ್ರೆಸ್ ಬೆಂಬಲದಿಂದ ನಡೆದ ಸಾಮೂಹಿಕ ನರಮೇಧ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಪಕ್ಷದ ಹಿರಿಯ ಉಪಾಧ್ಯಕ್ಷ ಹಾಗೂ ವಕ್ತಾರ ದಲ್ಜಿತ್ಸಿಂಗ್ ಛೀಮಾ ತಿಳಿಸಿದ್ದಾರೆ.
ಕಾಂಗ್ರೆಸ್ನ ಕಣ್ತೆರೆಸಲು ಈ ಪ್ರತಿಭಟನೆ ನಡೆಸಲಾಗುತ್ತಿದ್ದು, ಸತ್ಯದ ಧ್ವನಿಯನ್ನು ಅಡಗಿಸಲು ಬಿಡುವುದಿಲ್ಲ ಎಂದರು.
ಇದಕ್ಕೆ ತಿರುಗೇಟು ನೀಡಿರುವ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನಿಲ್ ಜಕ್ಹಾರ್, ಸಿಖ್ ಸಮುದಾಯದ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡುತ್ತಿದ್ದು, ಎಸ್ಎಡಿಯ ಪ್ರತಿಭಟನೆ ‘ರಾಜಕೀಯ ಗಿಮಿಕ್’ ಎಂದು ಲೇವಡಿ ಮಾಡಿದ್ದಾರೆ.