ನವದೆಹಲಿ: ಪೂರ್ವ ದೆಹಲಿಯ ಕೃಷ್ಣ ನಗರ ಪ್ರದೇಶದ ಕಟ್ಟಡವೊಂದರಲ್ಲಿ ಗುರುವಾರ ಮುಂಜಾನೆ ಅಗ್ನಿ ಅನಾಹುತ ಸಂಭವಿಸಿದ್ದು, ಅದರಲ್ಲಿದ್ದ 40 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದ ತಳ ಮಹಡಿಯಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ತಗುಲಿದೆ. ಕೂಡಲೇ ಮೇಲಿನ ಮಹಡಿಗಳಲ್ಲಿದ್ದವರು ಟೆರೇಸ್ಗೆ ತೆರಳಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಐದು ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿವೆ. ಮಹಿಳೆಯರು ಮಕ್ಕಳು ಸೇರಿದಂತೆ ಕಟ್ಟಡದಲ್ಲಿದ್ದ ಎಲ್ಲರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ಕರೆತಂದಿದ್ದಾರೆ.
‘ಪ್ಲಾಸ್ಟಿಕ್ ತ್ಯಾಜ್ಯಗಳು ಹೊತ್ತಿ ಉರಿದ ಪರಿಣಾಮ ಕಟ್ಟಡ ಹೊಗೆಯಿಂದ ಆವರಿಸಿತ್ತು. ಇದರಿಂದಾಗಿ ಮೇಲಿನ ಮಹಡಿಗಳಲ್ಲಿ ನಿದ್ರಿಸುತ್ತಿದ್ದವರು ಎಚ್ಚರಗೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.