ಲಖನೌ: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನಗಳು ಇರುವಂತೆಯೇ ‘ಮತಯಂತ್ರಗಳನ್ನು ತಿರುಚಲಾಗುತ್ತಿದೆ’ ಎಂಬ ಆರೋಪಗಳು ಇನ್ನಷ್ಟು ಬಲಗೊಂಡಿವೆ.
ಉತ್ತರ ಪ್ರದೇಶದ ಪೂರ್ವಭಾಗದ ವಾರಾಣಸಿ, ಚಂದೌಲಿ, ಮಿರ್ಜಾಪುರ ಹಾಗೂ ಗಾಜಿಪುರ ಜಿಲ್ಲೆಗಳಿಂದ ಸೋಮವಾರ ರಾತ್ರಿ ಮತಯಂತ್ರಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವಿಡಿಯೊಗಳು ವೈರಲ್ ಆಗಿವೆ. ಬಿಹಾರ ಮತ್ತು ಪಂಜಾಬ್ನಿಂದಲೂ ಇಂತಹ ಆರೋಪಗಳು ಕೇಳಿ ಬಂದಿವೆ.
Without any comment, an EVM video from Chandauli, UP.
— Ravi Nair (@t_d_h_nair) May 20, 2019
pic.twitter.com/Gmwj638mdo
‘ಇವಿಎಂಗಳನ್ನು ಬದಲಿಸಲಾಗುತ್ತಿದೆ’ ಎಂದು ಆರೋಪಿಸಿಈ ಜಿಲ್ಲೆಗಳ ಎಸ್ಪಿ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕಟ್ಟಡದ ಮುಂದ ಧರಣಿ ಆರಂಭಿಸಿದ್ದಾರೆ.
‘ಮತದಾನಕ್ಕೆ ಬಳಸಿದ್ದ ಇವಿಎಂಗಳನ್ನು ರಾತ್ರಿ ವೇಳೆಯಲ್ಲಿ ಹೊರಗೆ ಸಾಗಿಸಲಾಗುತ್ತಿದೆ’ ಎಂದು ಆರೋಪಿಸಿ ಗಾಜಿಪುರ ಕ್ಷೇತ್ರದ ಎಸ್ಪಿ–ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಅವರು ಪ್ರತಿಭಟನೆ ನಡೆಸಿದ್ದಾರೆ. ‘ಮತ ಎಣಿಕೆ ಮುಗಿಯುವವರೆಗೂ ಇಲ್ಲಿಯೇ ಕುಳಿತಿರುತ್ತೇವೆ’ ಎಂದಿದ್ದಾರೆ.
‘ಹೊರಗಡೆಯಿಂದ 35 ಮತಯಂತ್ರಗಳನ್ನು ತಂದು ಗಾಜಿಪುರದ ಭದ್ರತಾ ಕೊಠಡಿಯ ಒಳಗೆ ಇಡಲಾಗಿದೆ. ಅಲ್ಲಿಂದ 35 ಇವಿಎಂಗಳನ್ನು ಹೊರತೆಗೆದಾಗ ವಿಚಾರ ಬೆಳಕಿಗೆ ಬಂದಿದೆ’ ಎಂದು ಆರೋಪಿಸಲಾಗಿದೆ.
Polled EVMs are safe in sealed strong rooms under security, CCTV coverage and surveillance of candidates. There is no possibility of changing EVMs. Don't panic and keep faith.@ECISVEEP #DeshKaMahaTyohar #LokSabhaElections2019
— CEO UP #DeshKaMahaTyohar (@ceoup) May 21, 2019
ಬಳಕೆಯಾಗದ ಇವಿಎಂ:ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗವು, ‘ಮತಯಂತ್ರಗಳ ಸಾಗಾಟದ ಬಗ್ಗೆ ಮಾಡಲಾಗುತ್ತಿರುವ ಆರೋಪಗಳು ಸತ್ಯವಲ್ಲ’ ಎಂದಿದೆ.
‘ಚುನಾವಣೆಯಲ್ಲಿ ಬಳಸಿದ್ದ ಮತಯಂತ್ರಗಳನ್ನು ಇಟ್ಟಿರುವ ಕೊಠಡಿಯನ್ನು ಮೊಹರು ಮಾಡಲಾಗಿದೆ. ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಭದ್ರತಾ ಪಡೆಗಳ ಸಿಬ್ಬಂದಿ24 ಗಂಟೆಯೂ ಕಾವಲು ಕಾಯುತ್ತಾರೆ. ವಿರೋಧಪಕ್ಷಗಳವರ ಆರೋಪ ನಿರಾಧಾರವಾದುದು’ ಎಂದು ಆಯೋಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮತಯಂತ್ರ ಪ್ರಣವ್ ಕಳವಳ
ಮತಯಂತ್ರ ತಿರುಚುವ ವಿಚಾರಕ್ಕೆ ಸಂಬಂಧಿಸಿದಂತೆ ಬರುತ್ತಿರುವ ವರದಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಈ ಕುರಿತ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಪ್ರಣವ್, ‘ಪ್ರಜಾಪ್ರಭುತ್ವದ ಮೂಲಕ್ಕೇ ಸವಾಲೊಡ್ಡುವ ಯಾವ ಊಹಾಪೋಹಕ್ಕೂ ಅವಕಾಶ ನೀಡಬಾರದು. ಜನರ ತೀರ್ಪು ಪವಿತ್ರವಾದದ್ದು. ಅಲ್ಲಿ ಒಂದಿಷ್ಟು ಸಂದೇಹಕ್ಕೂ ಅವಕಾಶ ಇರಕೂಡದು’ ಎಂದಿದ್ದಾರೆ.
‘ಸಂಸ್ಥೆಯೊಂದರ (ಆಯೋಗದ) ವಿಶ್ವಾಸಾರ್ಹತೆಯನ್ನು ಉಳಿಸುವುದು ಅದರ ಸಿಬ್ಬಂದಿ ಹೊಣೆ. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಬೇಕು’ ಎಂದು ಅವರು ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.