ನವದೆಹಲಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ, ಚುನಾವಣೋತ್ತರ ಮೈತ್ರಿ ಕರಿತು ಚರ್ಚಿಸಲು ಮೇ 21ರಂದು ವಿರೋಧಪಕ್ಷಗಳ ಸಭೆ ಆಯೋಜಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಳ್ಳಲು ತೆರಳುವುದಕ್ಕೂ ಮುನ್ನ ರಾಹುಲ್ ಅವರನ್ನು ಭೇಟಿಮಾಡಿದ ನಾಯ್ಡು, ವಿವಿಪ್ಯಾಟ್ ಮತಗಳನ್ನು ಮತಯಂತ್ರದ ಜೊತೆ ತಾಳೆ ಮಾಡುವ ವಿಚಾರವಾಗಿಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.
‘ರಾಹುಲ್ ಮತ್ತು ನಾಯ್ಡು ಅವರು ಚುನಾವಣೋತ್ತರ ರಾಜಕಾರಣದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. ಮತ ಎಣಿಕೆಗೂ ಎರಡು ದಿನ ಮೊದಲು ವಿರೋಧ ಪಕ್ಷಗಳ ಸಭೆ ನಡೆಸಲು ರಾಹುಲ್ ಗಾಂಧಿ ಅವರು ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.