ಗುವಾಹತಿ: ಪೌರತ್ವ ಮಸೂದೆ ವಿರೋಧಿಸಿ 46 ಸಂಘಟನೆಗಳು 12 ಗಂಟೆಗಳ ಅಸ್ಸಾಂ ರಾಜ್ಯವ್ಯಾಪಿ ಬಂದ್ಗೆ ಕರೆಕೊಟ್ಟಿದ್ದು, ಹಲವು ಕಡೆ ರಸ್ತೆಗಳಲ್ಲಿ ಟೈರ್ಗೆ ಬೆಂಕಿ ಹಚ್ಚಲಾಗಿದೆ ಹಾಗೂ ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸುವ ಪ್ರಯತ್ನ ನಡೆದಿವೆ.
ರೈಲ್ವೆ ಹಳಿಗಳ ಮೇಲೆ ಕುಳಿತು ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ತೆರವುಗೊಳಿಸಿದ್ದಾರೆ. ಸಾರ್ವಜನಿಕ ಸಂಪರ್ಕ ವ್ಯವಸ್ಥೆಗೆ ಅಡಚಣೆ ಉಂಟಾಗದಂತೆ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ(ತಿದ್ದುಪಡಿ) ಮಸೂದೆ, 2016 ಅಂಗೀಕಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ(ಕೆಎಂಎಸ್ಎಸ್) ಸೇರಿದಂತೆ ಇತರೆ 45 ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ಹಾಗೂ ಎಐಯುಡಿಎಫ್ ಸಹ ಬೆಂಬಲ ನೀಡಿವೆ.
ಇದನ್ನೂ ಓದಿ:ಪೌರತ್ವ ವಿವಾದವೂ ರಾಜಕೀಯದಾಟವೂ
ಸಾರ್ವಜನಿಕ ಅಗತ್ಯ ಸೇವೆಗಳಿಗೆ ಅಡಚಣೆ ಆಗದಂತೆ ಕ್ರಮವಹಿಸಲು ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಹಾಗೂ ಎಸ್ಪಿಗಳಿಗೆ ಬಿಜೆಪಿ ಸರ್ಕಾರ ಸೂಚನೆ ನೀಡಿದೆ. ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ಹೊರಡಿಸಿದ್ದರು. ಅಂಗಡಿ, ವ್ಯಾಪಾರ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
Shops remain closed in Guwahati as a 12-hour statewide bandh has been called by over 40 organisations in Assam against Citizenship (Amendment) Bill 2016 pic.twitter.com/vcRHA7uGi1
— ANI (@ANI) October 23, 2018
ಪೌರತ್ವ(ತಿದ್ದುಪಡಿ) ಮಸೂದೆ, 2016
1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಪೌರತ್ವ(ತಿದ್ದುಪಡಿ) ಮಸೂದೆ, 2016ನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.ಮತೀಯ ದೌರ್ಜನ್ಯದ ಕಾರಣ 2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಇಲ್ಲಿನ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.ವಲಸೆ ಬಂದ ಹಿಂದೂಗಳು ಮಾತ್ರವಲ್ಲದೆ, ಬೌದ್ಧರು, ಕ್ರೈಸ್ತರು, ಸಿಖ್ಖರು, ಜೈನರು ಹಾಗೂ ಪಾರ್ಸಿಗಳಿಗೂ ಅನ್ವಯವಾಗುವಂತೆ ಈ ತಿದ್ದುಪಡಿ ಜಾರಿಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.