ನವದೆಹಲಿ : ಅಯೋಧ್ಯೆಯ ಬಾಬರಿ ಮಸೀದಿ–ರಾಮ ಮಂದಿರ ವಿವಾದಿತ ನಿವೇಶನದ ಸುತ್ತಲು ಇರುವ ಜಮೀನನ್ನು ಅದರ ಮೂಲ ಮಾಲೀಕರಿಗೆ ಹಸ್ತಾಂತರಿಸಲು ಅವಕಾಶ ಕೊಡಬೇಕು ಎಂಬ ಕೋರಿಕೆಯ ಅರ್ಜಿಯೊಂದನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯ ಮೂಲಕ ಅವಕಾಶ ಮಾಡಿಕೊಡಬೇಕು ಎಂದುಹಿಂದುತ್ವವಾದಿ ಸಂಘಟನೆಗಳು ಕೇಂದ್ರಸರ್ಕಾರದ ಮೇಲೆ ಭಾರಿಒತ್ತಡ ಹೇರುತ್ತಿವೆ. ಹಾಗಾಗಿ,ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇದು ನಿರ್ಣಾಯಕವಾದ ನಿಲುವು ಎಂದು ವಿಶ್ಲೇಷಿಸಲಾಗಿದೆ.
ವಿವಾದಾತ್ಮಕವಾದ 2.77 ಎಕರೆ ನಿವೇಶನವು ಸೇರಿ ಸುತ್ತಲಿನ 67 ಎಕರೆ ಜಮೀನನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ವಾಧೀನ ಮಾಡಿಕೊಂಡಿದೆ. ಈ ಜಮೀನನ್ನು ಅದರ ಮೂಲಮಾಲೀಕರಾದ ರಾಮ ಜನ್ಮಭೂಮಿ ನ್ಯಾಸಕ್ಕೆ (ರಾಮಮಂದಿರ ನಿರ್ಮಾಣ
ಕ್ಕಾಗಿ ವಿಶ್ವ ಹಿಂದೂ ಪರಿಷತ್ ಸ್ಥಾಪಿಸಿರುವ ಸಂಘಟನೆ) ಕೊಡಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೇಂದ್ರ ಸರ್ಕಾರ ವಿನಂತಿಸಿಕೊಂಡಿದೆ.ಅಯೋಧ್ಯೆಯ ನಿರ್ದಿಷ್ಟ ಸ್ಥಳಗಳ ಸ್ವಾಧೀನ ಕಾಯ್ದೆ 1993ರ ಅಡಿಯಲ್ಲಿ ಈ ಜಮೀನನ್ನು ಕೇಂದ್ರ ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ. ಇದಕ್ಕೆ ಒಂದು ವರ್ಷ ಮೊದಲು, ವಿವಾದಾತ್ಮಕ ಸ್ಥಳದಲ್ಲಿದ್ದ 16ನೇ ಶತಮಾನದ ಬಾಬರಿ ಮಸೀದಿಯನ್ನು ಕರಸೇವಕರು ಧ್ವಂಸ ಮಾಡಿದ್ದರು.
ವಿವಾದದ ಬಗ್ಗೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿದೆ. ವಿವಾದಿತ 2.77 ಎಕರೆ ನಿವೇಶನವನ್ನು ವ್ಯಾಜ್ಯದಾರರಾದ ಸುನ್ನಿ ವಕ್ಫ್ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾಗೆ ಸಮಾನವಾಗಿ ಹಂಚಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ 14 ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಮೇಲ್ಮನವಿಗಳ ವಿಚಾರಣೆ ವಿಳಂಬ ಆಗುತ್ತಿರುವುದಕ್ಕೆ ಹಿಂದುತ್ವವಾದಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
***
ಈಗಿನ ಸ್ಥಿತಿ ಏನು?
1991ರಲ್ಲಿ ಸ್ವಾಧೀನ ಪಡಿಸಿಕೊಂಡಿರುವ 67 ಎಕರೆ ಪ್ರದೇಶವು ಕೇಂದ್ರ ಸರ್ಕಾರದ ವಶದಲ್ಲಿದೆ. ಸ್ವಾಧೀನ ಪಡಿಸಿಕೊಂಡ ಜಮೀನಿನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು 2003ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶವನ್ನು ಬದಲಾಯಿಸಬೇಕು ಎಂದು ಈಗ ಕೇಂದ್ರ ಸರ್ಕಾರ ಕೋರಿದೆ.
ಜಮೀನನ್ನು ಮೂಲ ಮಾಲೀಕರಿಗೆ ನೀಡುವಂತೆ ಸಂವಿಧಾನ ಪೀಠವು ತೀರ್ಪು ನೀಡಿದೆ. 2003ರ ಆದೇಶವನ್ನು ಮಾರ್ಪಡಿಸಿ, ಸಂವಿಧಾನ ಪೀಠದ ತೀರ್ಪು ಜಾರಿಗೆ ಅವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರ ವಿನಂತಿಸಿಕೊಂಡಿದೆ.
***
ರಾಮ ಜನ್ಮಭೂಮಿ ನ್ಯಾಸಕ್ಕೆ ಸೇರಿದ ಈ ಜಮೀನಿನ ಬಗ್ಗೆ ವಿವಾದ ಇಲ್ಲ. ಕೇಂದ್ರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ
-ಅಲೋಕ್ ಕುಮಾರ್ ವಿಶ್ವ ಹಿಂದೂ ಪರಿಷತ್ನ ಕಾರ್ಯಾಧ್ಯಕ್ಷ
ಕೇಂದ್ರದ ಕ್ರಮ ಸ್ವಾಗತಾರ್ಹ. ವಿವಾದ ಇಲ್ಲದ ನಿವೇಶನದಲ್ಲಿ ಕಾಮಗಾರಿ ಆರಂಭಿಸಲು ನಮಗೆ ಅನುಮತಿ ನೀಡಬೇಕು
-ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ
ಕೇಂದ್ರ ಸರ್ಕಾರದ ಈ ವಂಚಕ ನಡೆಯನ್ನು ನಿರ್ಲಕ್ಷಿಸಬಾರದು. ವಿವಾದದಲ್ಲಿ ನ್ಯಾಯಯುತ ತೀರ್ಮಾನ ಆಗದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ
-ಅಸಾದುದ್ದೀನ್ ಒವೈಸಿ
ಎಐಎಂಐಎಂ ನಾಯಕ
ಕೇಂದ್ರದ ಕ್ರಮ ಸ್ವಾಗತಾರ್ಹ. ವಿವಾದ ಇಲ್ಲದ ನಿವೇಶನದಲ್ಲಿ ಕಾಮಗಾರಿ ಆರಂಭಿಸಲು ನಮಗೆ ಅನುಮತಿ ನೀಡಬೇಕು
-ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.