ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕುಗಳ ಹೋರಾಟಗಾರರಾದ ಗೌತಮ್ ನವಲಖಾ ಮತ್ತು ಆನಂದ್ ತೇಲ್ತುಂಬೆ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಆರ್. ಷಾ ಅವರನ್ನೊಳಗೊಂಡ ಪೀಠವು ಇಬ್ಬರು ಹೋರಾಟಗಾರರಿಗೆ ಮೂರು ವಾರದೊಳಗೆ ಶರಣಾಗಲು ಸೂಚಿಸಿದೆ. ಇಬ್ಬರ ಪಾಸ್ಪೋರ್ಟ್ಗಳನ್ನೂ ಒಪ್ಪಿಸುವಂತೆ ನ್ಯಾಯಾಲಯ ಹೇಳಿದೆ.
2018ರ ಜ. 1ರಂದು ಪುಣೆ ಜಿಲ್ಲೆಯ ಕೋರೆಗಾಂವ್ ಭೀಮಾ ಗ್ರಾಮದಲ್ಲಿ ನಡೆದ ಹಿಂಸಾಚಾರದ ನಂತರ ನವಲಖಾ, ತೇಲ್ತುಂಬೆ ಮತ್ತು ಇತರ ಕಾರ್ಯಕರ್ತರ ವಿರುದ್ಧ ಮಾವೋವಾದಿಗಳ ಸಂಪರ್ಕ ಸೇರಿದಂತೆ ಇತರ ಆರೋಪಗಳ ಕಾರಣಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.