ನವದೆಹಲಿ: ‘ಬಿಜೆಪಿಯು ಶಾಸಕರ ಖರೀದಿಯಲ್ಲಿ ತೊಡಗಿದ್ದು, ನಮ್ಮ ಪಕ್ಷದ ಏಳು ಮಂದಿ ಶಾಸಕರಿಗೆ ತಲಾ ₹ 10 ಕೋಟಿಯ ಆಮಿಷ ಒಡ್ಡಿದೆ’ ಎಂದು ಎಎಪಿ ಮುಖಂಡ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬುಧವಾರ ಆರೋಪಿಸಿದ್ದಾರೆ.
‘ಅಭಿವೃದ್ಧಿಯ ವಿಚಾರದಲ್ಲಿ ಜನರ ಮುಂದೆ ಹೇಳಿಕೊಳ್ಳಲು ಬಿಜೆಪಿಗೆ ವಿಷಯಗಳಿಲ್ಲದಿರುವುದರಿಂದ ಆ ಪಕ್ಷವು ಶಾಸಕರ ಖರೀದಿಗೆ ಕೈಹಾಕಿದೆ. ಈ ಹಿಂದೆಯೂ ಬಿಜೆಪಿ ಇಂಥ ಪ್ರಯತ್ನ ಮಾಡಿತ್ತು. ಆದರೆ ಆಗ ಜನರೇ ಆ ಪಕ್ಷಕ್ಕೆ ಸರಿಯಾದ ಉತ್ತರ ಕೊಟ್ಟಿದ್ದರು. ದೆಹಲಿಯ ಜನರು ಈ ಬಾರಿಯೂ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.
‘ಸಿಸೋಡಿಯ ಅವರ ಆರೋಪವು ವಿಲಕ್ಷಣವಾದುದು ಮತ್ತು ಜನರ ಗಮನವನ್ನು ಸೆಳೆಯಲು ಮಾಡಿದ ವ್ಯರ್ಥ ಪ್ರಯತ್ನ’ ಎಂದು ಬಿಜೆಪಿ ಮುಖಂಡ ಅಶೋಕ್ ಗೋಯಲ್ ಬಣ್ಣಿಸಿದ್ದಾರೆ.
ಪಕ್ಷದೊಳಗೆ ಎದ್ದಿರುವ ಭಿನ್ನಮತವನ್ನು ನಿಯಂತ್ರಿಸಲು ಅರವಿಂದ ಕೇಜ್ರಿವಾಲ್ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.