ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಗೆಳೆಯರೆಲ್ಲ ಮರಳಿ ಬನ್ನಿ: ಮುಕ್ತ ಆಹ್ವಾನ ನೀಡಿದ ಪ್ರಧಾನಿ ಮೋದಿ

Last Updated 10 ಜನವರಿ 2019, 20:32 IST
ಅಕ್ಷರ ಗಾತ್ರ

ಚೆನ್ನೈ:ಎನ್‌ಡಿಎ ಎಂಬುದು ನಂಬಿಕೆಗಳ ಮೇಲೆ ನಿಂತಿದೆಯೇ ಹೊರತು ಯಾವುದೇ ಒತ್ತಾಯಗಳ ಮೇಲೆ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಹಳೆಯ ಗೆಳೆಯ’ರಿಗೆ ಪಕ್ಷದ ಬಾಗಿಲು ಸದಾ ತೆರೆದೇ ಇದೆ ಎಂದೂ ಹೇಳುವ ಮೂಲಕ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮೈತ್ರಿಕೂಟ ವಿಸ್ತರಣೆಗೆ ಮುಕ್ತ ಆಹ್ವಾನ ಕೊಟ್ಟಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ, ರಜನಿಕಾಂತ್‌ ಅಥವಾ ಡಿಎಂಕೆಯ ಪೈಕಿ ಯಾರ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಪ್ರಶ್ನೆಗೆ ಮೋದಿ ಅವರು ಹೀಗೆ ಉತ್ತರಿಸಿದ್ದಾರೆ. ಈ ಉತ್ತರದ ಮೂಲಕ ಅವರು ಹಲವು ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ.ಡಿಎಂಕೆ ಜತೆಗೆ ಚುನಾವಣೋತ್ತರ ಮೈತ್ರಿ ಸಾಧ್ಯ ಎಂಬ ಸುಳಿವನ್ನು ಈ ಮೂಲಕ ನೀಡಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಎಐಎಡಿಎಂಕೆ, ಪಿಎಂಕೆ ಮತ್ತು ಬಿಜೆಡಿ ಪಕ್ಷಗಳು ಎನ್‌ಡಿಎ–1ರ ಭಾಗವಾಗಿದ್ದವು. ಎನ್‌ಡಿಎ–2ರಿಂದ ಟಿಡಿಪಿ ಮತ್ತು ಎಜಿಪಿ ಇತ್ತೀಚೆಗೆ ಹೊರ ಹೋಗಿವೆ. ಈ ಎಲ್ಲ ಪಕ್ಷಗಳಿಗೂ ಎನ್‌ಡಿಎ ಸೇರಲು ಮುಕ್ತ ಅವಕಾಶ ಇದೆ ಎಂದು ಮೋದಿ ಆಹ್ವಾನ ಕೊಟ್ಟಿದ್ದಾರೆ.

ತಮಿಳುನಾಡಿನ ಐದು ಜಿಲ್ಲೆಗಳ ಮತಗಟ್ಟೆ ಮಟ್ಟದ ಕಾರ್ಯಕರ್ತರ ಜತೆಗೆ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.

ಮೈತ್ರಿಕೂಟದ ಅಂಗ ಪಕ್ಷಗಳನ್ನು ಕಾಂಗ್ರೆಸ್‌ ಪಕ್ಷವು ಕೆಟ್ಟದಾಗಿ ನಡೆಸಿಕೊಂಡಿದೆ, ಮೈತ್ರಿಕೂಟವನ್ನು ಕೆಟ್ಟದಾಗಿ ನಿರ್ವಹಿಸಿದೆ ಎಂದು ಮೋದಿ ಆಪಾದಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮಾಡಿಕೊಂಡಿರುವ ಮೈತ್ರಿಕೂಟಕ್ಕೆ ಕಾಂಗ್ರೆಸ್‌ ಪಕ್ಷವನ್ನು ಸೇರಿಸಿಕೊಳ್ಳಲಾಗಿಲ್ಲ. ಹಾಗಿದ್ದರೂ ತನಗೆ ಮೇಲುಗೈಯಾಗಿದೆ ಎಂದು ಆ ಪಕ್ಷವು ಹೇಳುತ್ತಿರುವುದು ರಾಹುಲ್‌ ಗಾಂಧಿ ನೇತೃತ್ವದ ಪಕ್ಷದ ಅಹಂ ಅನ್ನು ತೋರುತ್ತದೆ ಎಂದಿದ್ದಾರೆ.

**
ರಾಹುಲ್‌ ಇದ್ದಲ್ಲಿ ಕೆಸಿಆರ್‌ ಇಲ್ಲ
ಹೈದರಾಬಾದ್‌:
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇದೇ 19ರಂದು ಕೋಲ್ಕತ್ತದಲ್ಲಿ ನಡೆಸಲು ಉದ್ದೇಶಿಸಿರುವ ವಿರೋಧ ಪಕ್ಷಗಳ ಸಮಾವೇಶದಲ್ಲಿ ಭಾಗವಹಿಸದಿರಲುತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.ಬಿಜೆಪಿ ಹಾಗೂ ಕಾಂಗ್ರೆಸ್‌ ಹೊರತಾಗಿ ಒಕ್ಕೂಟ ರಂಗ ರಚನೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥರೂ ಆಗಿರುವ ಕೆಸಿಆರ್‌ ತೀವ್ರ ಪ್ರಯತ್ನ ನಡೆಸಿದ್ದಾರೆ.

ಆದರೆ, ಕಾಂಗ್ರೆಸ್‌ ಹೊರಗಿಟ್ಟು ಮೈತ್ರಿ ರಚನೆ ಕುರಿತು ಮಮತಾ ಬ್ಯಾನರ್ಜಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

**

ಎಎಪಿ ಬೆಂಬಲ ಕೋರಿದ ರೈ
ನವದೆಹಲಿ
: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದ, ಚಿತ್ರ ನಟ ಪ್ರಕಾಶ್‌ ರೈ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ರೈ ಅವರು ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಬೆಂಬಲ ಕೋರಿದರು.

**
ವಾಜಪೇಯಿ ಅವರು 20 ವರ್ಷ ಹಿಂದೆ ದೇಶಕ್ಕೆ ಮೈತ್ರಿ ರಾಜಕಾರಣದ ಸಂಸ್ಕೃತಿ ಪರಿಚಯಿಸಿದರು. ಅವರು ತೋರಿದ ಹಾದಿಯನ್ನು ನಾವು ಅನುಸರಿಸುತ್ತೇವೆ.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT