ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸೇವೆಗಳಿಗೆ ಅಧಿಕಾರಿಗಳ ನಿಯೋಜನೆ: ರಾಜ್ಯಗಳಿಗೆ ಸೂಚನೆ

Last Updated 10 ಜೂನ್ 2020, 11:52 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಸೇವೆಗಳಿಗೆ ಉಪ ಕಾರ್ಯದರ್ಶಿ, ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿ ಮಟ್ಟದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನಿಯೋಜಿಸಿ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಅಧಿಕಾರಿಗಳ ವೃತ್ತಿಪರತೆ ಹಾಗೂ ಅನುಭವ ಹೆಚ್ಚಳಕ್ಕೆ ಇದು ಸಹಾಯವಾಗಲಿದೆ ಎಂದೂ ಹೇಳಿದೆ.

ಕೇಂದ್ರ ಸಿಬ್ಬಂದಿ ಯೋಜನೆಯಡಿ, ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಅಡಿಯಲ್ಲಿ ಕಾರ್ಯನಿರ್ವಹಿಸುವ ಮುಖ್ಯ ವಿಚಕ್ಷಣಾ ಅಧಿಕಾರಿಗಳ ಹುದ್ದೆಗಳಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಮಾಡಿದ ಕೋರಿಕೆ ಮೇರೆಗೆ ರಾಜ್ಯಗಳಿಂದ ಕನಿಷ್ಠ ನಾಮನಿರ್ದೇಶನ ಬಂದಿದ್ದರಿಂದ ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಕ್ರಮಕ್ಕೆ ಮುಂದಾಗಿದೆ.

‘ಇಲ್ಲಿಯವರೆಗೆ ಸ್ವೀಕರಿಸಿರುವ ನಾಮನಿರ್ದೇಶನಗಳ ಸಂಖ್ಯೆ ಬಹಳ ಕಡಿಮೆ ಇದೆ. ಕೇಂದ್ರ ಸಿಬ್ಬಂದಿ ಯೋಜನೆಯಡಿ, ವಿಶೇಷವಾಗಿ ಉಪ ಕಾರ್ಯದರ್ಶಿ, ನಿರ್ದೇಶಕರ ಮಟ್ಟದ ಅಧಿಕಾರಿಗಳ ಪ್ರಾತಿನಿಧ್ಯ ಸಹ ಕಡಿಮೆ ಇದೆ’ ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

‘ಕಡಿಮೆ ಸಂಖ್ಯೆಯ ಅಧಿಕಾರಿಗಳನ್ನು ಕೇಂದ್ರಕ್ಕೆ ನಿಯೋಜನೆ ಮಾಡಿದ್ದರಿಂದ ಉಪ ಕಾರ್ಯದರ್ಶಿ/ನಿರ್ದೇಶಕ ಮಟ್ಟದ ಕೇಡರ್‌ ನಿರ್ವಹಣೆಯಲ್ಲಿ ಭಾರಿ ಅಂತರ ಉಂಟಾಗಿದೆ’ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಕೇಂದ್ರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಕಳುಹಿಸಿರುವ ಆದೇಶದಲ್ಲಿ ಹೇಳಲಾಗಿದೆ.

‘ಕೇಂದ್ರ ಸಿಬ್ಬಂದಿ ಯೋಜನೆಯಡಿ ನಿಯೋಜಿಸಲು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ಕಳುಹಿಸಬೇಕು. ಹಿರಿಯ ಶ್ರೇಣಿಗೆ ಬಡ್ತಿ ಪಡೆಯುವ ಅಂಚಿನಲ್ಲಿರುವ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಬಾರದು. ಬಡ್ತಿ ಪಡೆಯಲು ಈ ಅಧಿಕಾರಿಗಳು ವಾಪಸು ಬರುವುದು ಅಗತ್ಯವಿರುತ್ತದೆ. ಆದ್ದರಿಂದ ಪೂರ್ಣ ಅವಧಿಗೆ ಲಭ್ಯವಾಗುವ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT