ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...

Last Updated 20 ಮಾರ್ಚ್ 2020, 3:02 IST
ಅಕ್ಷರ ಗಾತ್ರ

ನವದೆಹಲಿ (ತಿಹಾರ್‌ ಜೈಲ್‌): ದೇಶದಾದ್ಯಂತ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ. ಈ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ನಾಲ್ವರನ್ನು ಇಂದು ಮುಂಜಾನೆ 5:30ರ ಸುಮಾರಿಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ.

ಮರಣದಂಡನೆಯ ಅಂತಿಮ ಕ್ಷಣಗಳಲ್ಲಿ ತಿಹಾರ್‌ ಜೈಲಿನಲ್ಲಿ ನಡೆದ ಬೆಳವಣಿಗೆಗಳ ಬಗೆಗಿನ ಮಾಹಿತಿ ಇಲ್ಲಿದೆ.

ಇಂದು ನಸುಕಿನ ಸುಮಾರು 3 ಗಂಟೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಬಗ್ಗೆ ವಾದ–ವಿವಾದಗಳು ಆರಂಭಗೊಂಡವು. 3:50ಕ್ಕೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಂಡು, ಗಲ್ಲಿ ಶಿಕ್ಷೆ ಕಾಯಂಗೊಳಿಸಿ ತೀರ್ಪು ನೀಡಲಾಯಿತು. ಆ ವೇಳೆ, ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ ಮತ್ತು ನಿರ್ಭಯಾ ತಂದೆ–ತಾಯಿಗಳು ಸುಪ್ರೀಂ ಕೋರ್ಟ್‌ನಲ್ಲೇ ಭಾವುಕರಾದರು.

ನಸುಕಿನ ಜಾವ 5.15ರ ಸುಮಾರಿಗೆ ಅಪರಾಧಿಗಳಿಗೆ ನ್ಯಾಯಾಲಯ ಜಾರಿ ಮಾಡಿದ್ದ ಡೆತ್ ವಾರಂಟ್‌ಗೆ ಸಹಿ ಮ್ಯಾಜಿಸ್ಟ್ರೇಟ್ ಹಾಕಿದರು.

ಆ ನಂತರ ಜೈಲು ಕೋಣೆಯಲ್ಲಿ ಮಲಗಿದ್ದ ಅಪರಾಧಿಗಳನ್ನು ಎಬ್ಬಿಸಿ ಸ್ನಾನ ಮಾಡಲು ಸೂಚಿಸಲಾಯಿತು. ಪ್ರತಿ ಅಪರಾಧಿಯ ಜೊತೆಗೆ 6 ಮಂದಿ ಜೈಲು ಸಿಬ್ಬಂದಿಯನ್ನು ಕಾವಲಿಗಾಗಿ ನಿಯೋಜಿಸಲಾಗಿತ್ತು.

ಸ್ನಾನದ ನಂತರ ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿ 5:25ಕ್ಕೆ ಅಪರಾಧಿಗಳನ್ನು ವಧಾ ಸ್ಥಳಕ್ಕೆ ಕರೆತರಲಾಯಿತು.

ಮೊದಲೇ ಸಿದ್ಧಪಡಿಸಲಾಗಿದ್ದ ನಾಲ್ಕು ಪ್ರತ್ಯೇಕ ನೇಣುಗಂಬಗಳ ಮುಂದೆ ಅಪರಾಧಿಗಳನ್ನು ಕರೆತಂದು ನಿಲ್ಲಿಸಲಾಯಿತು. 5:30ಕ್ಕೆ ಅವರನ್ನು ಗಲ್ಲಿಗೇರಿಸಲಾಯಿತು.

ಇದಾದ ಮೂರು ನಿಮಿಷಗಳ ನಂತರ, '2012ರ ದೆಹಲಿ ಅತ್ಯಾಚಾರ ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು' ಎಂದು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿಕೆ ನೀಡಿದರು.

ನೇಣುಗಂಬದಲ್ಲಿ ಜೀವಬಿಟ್ಟ ಅಪರಾಧಿಗಳ ಮರಣೋತ್ತರ ಪರೀಕ್ಷೆಯನ್ನು 6 ಗಂಟೆಗೆ ನಡೆಸಲಾಯಿತು.‌

ಮರಣೋತ್ತರ ಪರೀಕ್ಷೆ 6:10ಕ್ಕೆ ಮುಕ್ತಾಯಗೊಂಡಿತು. ವೈದ್ಯರು ಅಪರಾಧಿಗಳ ಸಾವನ್ನು ದೃಢಪಡಿಸಿದರು.

ಇಲ್ಲಿಗೆ ದೇಶದ ಅತಿ ಪ್ರಮುಖ ಅಪರಾಧವೊಂದಕ್ಕೆ ತೆರೆಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT