ಪುಣೆ: ಸಂಬಂಧಿಕರನ್ನು ಮಾತನಾಡಿಸಲು ಕಾರಾಗೃಹ ಸಿಬ್ಬಂದಿ ಬಿಡಲಿಲ್ಲ ಎಂಬ ಕಾರಣಕ್ಕಾಗಿ ವಿಚಾರಣಾಧೀನ ಖೈದಿಯೊಬ್ಬ ಜೈಲಿನ ಫೋನ್ ಸಿಸ್ಟಂ ಪುಡಿ ಪುಡಿ ಮಾಡಿದ ಘಟನೆ ಯರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ 11ಗಂಟೆಗೆ ವಿಚಾರಣಾಧೀನ ಖೈದಿ ಸಂದೀಪ್ ದುನೆ ಎಂಬಾತನಿಗೆ ಆತನ ಸಂಬಂಧಿಕರು ದೂರವಾಣಿ ಕರೆ ಮಾಡಿದ್ದರು. ಈ ಸಮಯದಲ್ಲಿ ಕಾರಾಗೃಹ ಸಿಬ್ಬಂದಿ ಸಂದರ್ಶಕರ ಕೊಠಡಿಯಲ್ಲಿರುವ ದೂರವಾಣಿಯಲ್ಲಿ ಆತನಿಗೆ ಮಾತನಾಡಲು ಅವಕಾಶ ನೀಡಿದರು. ನಿಗದಿತ ಸಮಯಕ್ಕೆ ಆತ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸದೆ ಮಾತನಾಡುತ್ತಲೇ ಇದ್ದ. ಇದನ್ನು ಗಮನಿಸಿದ ಸಿಬ್ಬಂದಿ ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಆತ ಎಚ್ಚರಿಕೆಯನ್ನು ಲೆಕ್ಕಿಸಲಿಲ್ಲ. ಇದರಿಂದ ಕಾರಾಗೃಹ ಸಿಬ್ಬಂದಿ ದೂರವಾಣಿ ಸಂಪರ್ಕ ಕಡಿತಗೊಳಿಸಿದರು.
ಇದರಿಂದ ಕೋಪಗೊಂಡ ಆತ ದೂರವಾಣಿ ಯಂತ್ರವನ್ನು ಪುಡಿ ಪುಡಿ ಮಾಡಿದ್ದಲ್ಲದೆ, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.