ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಥಗ್ಧರ್ ವಲಯದ ಗಡಿಯಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಐವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಗಡಿಯೊಳಗೆ ಶನಿವಾರ ಬೆಳಿಗ್ಗೆ ನುಸುಳಲು ಯತ್ನಿಸಿದ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿದಾಳಿ ನಡೆಸಿದ ಸೇನೆ, ಐವರು ಉಗ್ರರನ್ನು ಹತ್ಯೆಗೈದಿದೆ. ಗಡಿಯಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ರಾಜೇಶ್ ಕಾಲಿಯಾ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಶಸ್ತ್ರಸಜ್ಜಿತ ಉಗ್ರರು ನಡೆಸಲು ಯೋಜಿಸಿದ್ದ ದೊಡ್ಡ ಆಕ್ರಮಣವಿದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.