ಮುಂಬೈ/ಕೊಲ್ಹಾಪುರ: ವಿಚಾರವಾದಿ, ಕಮ್ಯುನಿಸ್ಟ್ ನಾಯಕ ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ಕಾರ್ಯಕರ್ತ ಶರದ್ ಕಲಾಸ್ಕರ್ನನ್ನು ಮಂಗಳವಾರ ಬಂಧಿಸಲಾಗಿದೆ.
ಸಿಐಡಿಯ ವಿಶೇಷ ತನಿಖಾ ತಂಡ ಕಲಾಸ್ಕರ್(25)ನನ್ನು ಮುಂಬೈನಲ್ಲಿ ಬಂಧಿಸಿ ಕೊಲ್ಹಾಪುರದ ನ್ಯಾಯಾಲಯದಲ್ಲಿ ಹಾಜರುಪಡಿಸಿತು. ನ್ಯಾಯಾಲಯ ಜೂನ್ 18ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು. ಇನೊಬ್ಬ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಗುಂಡಿಕ್ಕಿದ್ದ ಇಬ್ಬರಲ್ಲಿ ಈತನೂ ಒಬ್ಬ ಎಂದು ಸಿಬಿಐ ಹೇಳಿತ್ತು.
’ಪಾನ್ಸರೆ ಅವರನ್ನು ಹತ್ಯೆಗೈಯುವ ಮುನ್ನ ಕಲಾಸ್ಕರ್ ಒಂದು ವಾರಕ್ಕೂ ಹೆಚ್ಚು ಕಾಲ ಕೊಲ್ಹಾಪುರದಲ್ಲಿ ನೆಲೆಸಿದ್ದ. ಪಾನ್ಸರೆ ಹತ್ಯೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವುದರಿಂದ ಕಲಾಸ್ಕರ್ನನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲೂ ಕಲಾಸ್ಕರ್ನನ್ನು ಬಂಧಿಸಲಾಗಿತ್ತು. ಈತ 16ನೇ ಆರೋಪಿಯಾಗಿದ್ದು, ಹತ್ಯೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಲಸ್ಕರ್ನನ್ನು ಕಳೆದ ವರ್ಷ ಅಗಸ್ಟ್ನಲ್ಲಿ ಪಾಲ್ಗಡ್ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು.