ನವದೆಹಲಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವು ನಿರಾಕರಿಸುವ ಮೂಲಕ ಸರ್ಕಾರ ದೇಶದ ಆರ್ಥಿಕತೆಯನ್ನುವ್ಯವಸ್ಥಿತವಾಗಿ ಹಾಳುಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ‘ರಾಕ್ಷಸ 2.0' ಎಂದು ಟೀಕಿಸಿ ಟ್ವೀಟ್ ಮಾಡಿರುವ ರಾಹುಲ್ಗಾಂಧಿ ಅವರು, ದೇಶದ ಆರ್ಥಿಕತೆ ಮತ್ತು ಸಣ್ಣ, ಮಧ್ಯಮ ಕೈಗಾರಿಕೆ ಕ್ಷೇತ್ರದ ಮೇಲೆ ಕೊರೊನಾ ಸೋಂಕು ಪರಿಣಾಮ ಕುರಿತ ಪತ್ರಿಕಾ ವರದಿಯೊಂದನ್ನು ಇದರೊಂದಿಗೆ ಹಂಚಿಕೊಂಡಿದ್ದಾರೆ.
ಕಡು ಬಡವರಿಗೆ ₹ 10 ಸಾವಿರ ನೆರವು ಮತ್ತು ಸಣ್ಣ, ಮಧ್ಯಮ ವಲಯದ ಕೈಗಾರಿಕೆಗಳಿಗೆ ಆರ್ಥಿಕ ಪ್ಯಾಕೇಜ್ ಒದಗಿಸುವ ಮೂಲಕ ರಕ್ಷಣೆಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಅನುವಾಗುವಂತೆ ಆರ್ಥಿಕ ನೆರವು ಒದಗಿಸದ ಮೂಲಕ ಸರ್ಕಾರ ತಪ್ಪು ಮಾಡುತ್ತಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿದ ಲಾಕ್ಡೌನ್ ಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.