ಜೈಪುರ: ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಗುಜ್ಜಾರ್ ಸಮುದಾಯದವರು ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಕಾರರು ರೈಲ್ವೆ ಹಳಿಗಳ ಮೇಲೆ ಧರಣಿ ಕುಳಿತಿರುವುದರಿಂದ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಒಂದು ರೈಲಿನ ಸಂಚಾರ ಮಾರ್ಗವನ್ನು ಬದಲಿಸಲಾಯಿತು.
ಗುಜ್ಜಾರ್ ನಾಯಕ ಕಿರೊರಿ ಸೀಮಗ್ ಬೈಂಸ್ಲಾ ಹಾಗೂ ಅವರ ಬೆಂಬಲಿಗರುಮಾಧೋಪುರ–ಬಯಾನ ರೈಲು ನಿಲ್ದಾಣದಲ್ಲಿ ಶನಿವಾರವೂ ಧರಣಿ ಮುಂದುವರಿಸಿದರು.ಗುಜ್ಜಾರ್ರೊಂದಿಗೆ ರೈಕಾ–ರೇಬರಿ, ಗಾಡಿಯಾ ಲುಹಾರ್, ಬಂಜಾರ ಹಾಗೂ ಗಡಾರಿಯಾ ಸಮುದಾಯದವರೂ ಧರಣಿಯಲ್ಲಿ ಪಾಲ್ಗೊಂಡಿದ್ದರು.
’ನಮ್ಮ ಬೇಡಿಕೆ ಈಡೇರಿಕೆಗಾಗಿ 20 ದಿನಗಳಿಂದ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಸರ್ಕಾರದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ‘ ಎಂದು ಗುಜ್ಜಾರ್ ಸಮುದಾಯದ ಮತ್ತೊಬ್ಬ ನಾಯಕ ವಿಜಯ್ ಬೈಂಸ್ಲಾ ಹೇಳಿದರು.
ಪ್ರತಿಭಟನಕಾರರು ಶನಿವಾರ ಜೈಪುರ–ದೆಹಲಿ, ಜೋಧಪುರ–ಭಿಲ್ವಾರ, ಅಜ್ಮೀರ್–ಭಿಲ್ವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.