ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ವಿಚಾರವಾಗಿ ಭಾರತ ರಾಜತಾಂತ್ರಿಕ ನೆರವು ಕೋರಿದೆ.
ಎರಡು ದಿನಗಳ ಹಿಂದೆ ಈ ಪ್ರಕ್ರಿಯೆ ನಡೆದಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
ಇನ್ನು ಫೆಬ್ರವರಿ 18ರಿಂದ 21ರವರೆಗೆ ಹೇಗ್ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ವಿಚಾರಣೆ ನಡೆಯಲಿದೆ ಎಂದುಇಂಧೋರ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಷ್ಮಾ ಸ್ವರಾಜ್ ತಿಳಿಸಿದರು.
ಏನಿದು ಪ್ರಕರಣ? ಬೇಹುಗಾರಿಕೆ, ಭಯೋತ್ಪಾದನೆ ನಡೆಸಿರುವ ಆರೋಪದಲ್ಲಿ 47 ವರ್ಷ ವಯಸ್ಸಿನ ಜಾಧವ್ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಈ ವರ್ಷದ ಏಪ್ರಿಲ್ನಲ್ಲಿ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಭಾರತಐಸಿಜೆಗೆ ಅರ್ಜಿ ಸಲ್ಲಿಸಿತ್ತು.
ಅಲ್ಲದೇ, ತಮ್ಮ ವಾದ ಮಂಡಿಸಲು ಮತ್ತು ಭಾರತದ ದೂತಾವಾಸ ಸಂಪರ್ಕಿಸಲು ಜಾಧವ್ಗೆ ಪಾಕಿಸ್ತಾನ ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸಿತ್ತು.
ಇದರ ವಿಚಾರಣೆ ನಡೆಸಿದ್ದ ಅಂತರರಾಷ್ಟ್ರೀಯ ನ್ಯಾಯಾಲಯ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಿತ್ತು. ಇನ್ನಷ್ಟೇ ತೀರ್ಪು ಪ್ರಕಟಿಸಬೇಕಾಗಿದೆ.
ಇರಾನ್ನಿಂದ ಅಕ್ರಮವಾಗಿ ಪ್ರವೇಶಿಸಿದ ಜಾಧವ್ ಅಲಿಯಾಸ್ ಹುಸೇನ್ ಮುಬಾರಕ್ ಅವರನ್ನು ಹಿಂಸಾಪೀಡಿತ ಬಲೂಚಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.
ಈ ವಾದವನ್ನು ತಿರಸ್ಕರಿಸಿರುವ ಭಾರತ, ಇರಾನ್ನಲ್ಲಿ ಉದ್ಯಮ ನಡೆಸುತ್ತಿದ್ದ ಜಾಧವ್ ಅವರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದೆ.