ನವದೆಹಲಿ: ದೇಶಕ್ಕೆ ಎದುರಾಗಿರುವ ಅನಿಶ್ಚಿತ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ‘ಸ್ಪಷ್ಟ ಕಾರ್ಯಸೂಚಿ ಹೊಂದಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವನೆ ಹೇಳಿದ್ದಾರೆ. ಈ ಮೂಲಕ ರಾಷ್ಟ್ರೀಯ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದೂ ಪ್ರತಿಪಾದಿಸಿದ್ದಾರೆ.
ಭಾರತದ ನೆರೆಹೊರೆಯಲ್ಲಿನ ಸಂಕೀರ್ಣ ರಾಜಕೀಯ ಶಕ್ತಿಯನ್ನು ಉಲ್ಲೇಖಿಸಿದ ಜನರಲ್ ನರವನೆ ಅವರು, ಭಾರತೀಯ ಸೇನಾ ಪಡೆಯು ದೇಶದ ಹಿರಿಮೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಹೇಳಿದರು.
ಒಟ್ಟಾರೆ ಈಗ ದೇಶವನ್ನು ಅನಿಶ್ಚಿತವಾದ ಕಾರ್ಯತಂತ್ರಗಳು ಆವರಿಸಿವೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಒಟ್ಟು ಸ್ಥಿತಿಯನ್ನು ವಿಶ್ಲೇಷಿಸಿ ತೀರ್ಮಾನ ಕೈಗೊಳ್ಳಬೇಕಾದ್ದು ಈ ಹೊತ್ತಿನ ಅಗತ್ಯವಾಗಿದೆ ಎಂದರು.
ಪಾಕಿಸ್ತಾನದಿಂದ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ಗೆ ಬೆಂಬಲ ಹಾಗೂ ಚೀನಾವು ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಮಾಲ್ಡೀವ್ಸ್ ಜೊತೆಗೆ ಸೇನಾ ಒಪ್ಪಂದ ಹೊಂದಲು ಯತ್ನಿಸುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.