ಜಮ್ಮು (ಪಿಟಿಐ): ಪಾಕಿಸ್ತಾನ ಸೇನೆಯು ರಜೌರಿ ಮತ್ತು ಪೂಂಚ್ನ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನಾ ಠಾಣೆಗಳು, ಹಳ್ಳಿಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಭಾನುವಾರ ಮಾಹಿತಿ ನೀಡಿದ್ದಾರೆ.
ರಜೌರಿಯ ನೌಶೇರಾ ವಲಯದಲ್ಲಿ ಬೆಳಿಗ್ಗೆ ಹಾಗೂ ಕೃಷ್ಣಘಾಟಿ, ಮೆಂದಾರ್, ಪೂಂಚ್ನಲ್ಲಿ ರಾತ್ರಿ ಪಾಕ್ ಸೇನೆಯು ದಾಳಿ ನಡೆಸಿದೆ. ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಆದರೆ ಯಾವುದೇ ಸಾವು– ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಪೂಂಚ್ ವಲಯದಲ್ಲಿ ಗುಂಡಿನ ಚಕಮಕಿ ನಿಂತಿದೆ. ಆದರೆ, ಭಾನುವಾರ ಬೆಳಿಗ್ಗೆವರೆಗೂ ರಜೌರಿ ವಲಯದಲ್ಲಿ ಗುಂಡಿನ ದಾಳಿ ಮುಂದುವರಿದಿತ್ತು. ನೌಶೇರಾ ವಲಯದ ಗ್ರಾಮಗಳಿಗೆ ಹೆಚ್ಚಿನ ಹಾನಿ ಆಗಿದೆ ಎಂದು ಅವರು ವಿವರಿಸಿದ್ದಾರೆ.