ಪ್ರಯಾಗರಾಜ್/ಉತ್ತರ ಪ್ರದೇಶ: ಕುಂಭಮೇಳದಿಂದ ಉತ್ತರ ಪ್ರದೇಶದಲ್ಲಿ ₹1.2 ಲಕ್ಷ ಕೋಟಿಯಷ್ಟು ವಹಿವಾಟು ನಡೆಯುವ ನಿರೀಕ್ಷೆ ಇದೆ.
ಕುಂಭಮೇಳ ಸಂಪೂರ್ಣ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾದರೂ ವಿಭಿನ್ನ ವಲಯಗಳ ಆರು ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಒದಗಿಸಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹೇಳಿದೆ.
50 ದಿನಗಳ ಮೇಳಕ್ಕೆ ಸರ್ಕಾರ ₹4,200 ಕೋಟಿ ಅನುದಾನ ನೀಡಿದೆ. 2013ರಲ್ಲಿ ₹1,300 ಕೋಟಿ ನೀಡಲಾಗಿತ್ತು.ಆತಿಥ್ಯ ವಲಯ 2.50 ಲಕ್ಷ, ವಿಮಾನಯಾನ 1.50 ಲಕ್ಷ, ಪ್ರವಾಸೋದ್ಯಮ ವಲಯ 45 ಸಾವಿರ ಜನರಿಗೆ ಉದ್ಯೋಗ ಒದಗಿಸಿದೆ.
ವೈದ್ಯಕೀಯ ಮತ್ತು ಪರಿಸರ ಪ್ರವಾಸೋದ್ಯಮ 85 ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದು ಸಿಐಐ ವರದಿ ಹೇಳಿದೆ.ಕುಂಭಮೇಳದಿಂದಾಗಿ ಅಸಂಘಟಿತ ವಲಯದಲ್ಲಿ 55 ಹೊಸ ಉದ್ಯೋಗ ಸೃಷ್ಟಿಯಾಗಿವೆ. ಟ್ಯಾಕ್ಸಿ, ಗೈಡ್, ಸ್ಥಳೀಯ ಚಿಕ್ಕಪುಟ್ಟ ವರ್ತಕರಿಗೆ ಉದ್ಯೋಗ ಮತ್ತು ವಹಿವಾಟು ಲಭಿಸಿದೆ.
ಕುಂಭಮೇಳಕ್ಕೆ ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಂದ ಉತ್ತರ ಪ್ರದೇಶಕ್ಕೆ ಮಾತ್ರವಲ್ಲ, ನೆರೆಯ ಮಧ್ಯ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹಿಮಾಚಲ ಪ್ರದೇಶಗಳಿಗೂ ಕೋಟ್ಯಂತರ ರೂಪಾಯಿ ವರಮಾನ ಹರಿದು ಬರುತ್ತಿದೆ ಎಂದು ಸಿಐಐ ವರದಿ ಹೇಳಿದೆ.
ಭಾರಿ ವಿಸ್ತಾರ: ಕುಂಭ ಮೇಳ ನಡೆಯುವ ಪ್ರದೇಶವನ್ನು ಈ ಭಾರಿ ವಿಸ್ತರಿಸಲಾಗಿದೆ. ಕಳೆದ ಬಾರಿ 1,600 ಹೆಕ್ಟೇರ್ ಪ್ರದೇಶದಲ್ಲಿ ಮೇಳ ನಡೆದಿತ್ತು. ಈ ಬಾರಿ ಅದನ್ನು 3,200 ಹೆಕ್ಟೇರ್ಗೆ ಹೆಚ್ಚಿಸಲಾಗಿದೆ.
ಇಂದು ಎರಡನೇ ಪುಣ್ಯ ಸ್ನಾನ
ಗಂಗಾ, ಸರಸ್ವತಿ ಮತ್ತು ಯಮುನಾ ನದಿಗಳ ತ್ರಿವೇಣಿ ಸಂಗಮದಲ್ಲಿಪೌಶ ಪೂರ್ಣಿಮೆ (ಪೂರ್ಣ ಹುಣ್ಣಿಮೆ) ಅಂಗವಾಗಿ ಸೋಮವಾರ (ಜ.21) ಎರಡನೇ ಪುಣ್ಯ ಸ್ನಾನ ನಡೆಯಲಿದೆ.
ಅಂದಾಜು 20 ಲಕ್ಷ ಭಕ್ತರು ಸೋಮವಾರ ಪುಣ್ಯ ಸ್ನಾನ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾತಿಯಂದು ಮೊದಲ ಪುಣ್ಯ ಸ್ನಾನ ಅಥವಾ ಶಾಹಿ ಸ್ನಾನ ನಡೆದಿತ್ತು.
ಲಕ್ಷಾಂತರ ಭಕ್ತರು ಪ್ರಯಾಗರಾಜ್ನತ್ತ ಆಗಮಿಸುತ್ತಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.