ತಿರುವನಂತಪುರ: ಸಾಕ್ಷರತೆ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು, ಮುಂದೆ ಕಂಪ್ಯೂಟರ್ ಕಲಿಯ ಬಯಸುವುದಾಗಿ ಹೇಳಿದ್ದ 96 ವರ್ಷದ ಅಜ್ಜಿ ಕಾರ್ತ್ಯಾಯಿನಿ ಅಮ್ಮ ಅವರಿಗೆ ಕೇರಳ ಸರ್ಕಾರ ಲ್ಯಾಪ್ಟಾಪ್ ಉಡುಗೊರೆ ನೀಡಿದೆ.
ಸರ್ಕಾರ ಇತ್ತೀಚೆಗೆ ನಡೆಸಿದ್ದ ‘ಅಕ್ಷರಲಕ್ಷಂ’ ಸಾಕ್ಷರತಾ ಯೋಜನೆಯಡಿ, ತಲಾ 30 ಅಂಕಗಳಿಗೆ ನಡೆದ ಗಣಿತ ಮತ್ತು ಓದುವ ವಿಭಾಗದಲ್ಲಿ ಪೂರ್ಣ ಅಂಕ ಪಡೆದಿದ್ದ ಅಮ್ಮ, ಬರವಣಿಗೆಯಲ್ಲಿ 40ಕ್ಕೆ 38 ಅಂಕ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಅಲಪ್ಪುಳ ಜಿಲ್ಲೆಯ ಚೆಪ್ಪಡ್ ಗ್ರಾಮದಲ್ಲಿನ ಅವರ ಮನೆಗೆ ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಬುಧವಾರ ದಿಢೀರ್ ಭೇಟಿ ನೀಡಿದ್ದರು. ‘ನೀವು ಕಂಪ್ಯೂಟರ್ ಕಲಿಯ ಬಯಸಿದ್ದೀರಾ’ ಎಂದು ಸಚಿವರು ಕೇಳಿದಾಗ ‘ಕಂಪ್ಯೂಟರ್ ಸಿಕ್ಕರೆ ಕಲಿಯುತ್ತೇನೆ’ ಎಂದು ಅಮ್ಮ ಉತ್ತರಿಸಿದರು.
ನಿವೃತ್ತ ಕಾಲೇಜು ಉಪನ್ಯಾಸಕರಾಗಿರುವ ಸಚಿವರು ಕೂಡಲೇ ಅವರಿಗೆ ‘ಅಚ್ಚರಿದಾಯಕ ಉಡುಗೊರೆ’ಯನ್ನು ತೆಗೆದುಕೊಟ್ಟರು. ಮಾತ್ರವಲ್ಲದೆ, ಅದರ ಕೀಲಿಮಣೆ ಒತ್ತಲು ಸಹ ನೆರವಾದರು.
ರಾಜ್ಯದ ಅತ್ಯಂತ ಹಿರಿಯ ವಿದ್ಯಾರ್ಥಿಯಾದ ಅಮ್ಮನಿಗೆ ಹೆಚ್ಚಿನ ಶಿಕ್ಷಣ ಪಡೆಯಲು ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ರವೀಂದ್ರನಾಥ್ ಭರವಸೆ ನೀಡಿದರು.