ಚೆನ್ನೈ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ರಾಜ್ಯವ್ಯಾಪಿ 144ನೇ ವಿಧಿಯನ್ವಯ ನಿಷೇಧಾಜ್ಞೆ ಜಾರಿ ಮಾಡಲು ನಿರ್ಧರಿಸಿದೆ.
ನಾಳೆ ಸಂಜೆ (ಮಾರ್ಚ್ 24) 6 ಗಂಟೆಯಿಂದ ಮಾರ್ಚ್ 31ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಘೋಷಿಸಿದರು.
ವಿಧಾನಸಭೆಯಲ್ಲಿ ಇಂದು (ಮಾರ್ಚ್ 23, ಸೋಮವಾರ) ಈ ಕುರಿತು ಹೇಳಿಕೆ ನೀಡಿದ ಅವರು, ಅತಿಮುಖ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.
ನಿಷೇಧಾಜ್ಞೆ ಜಾರಿಯಿರುವ ಅವಧಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಗಳನ್ನೂ ನಿರ್ಬಂಧಿಸಲಾಗುವುದು. ತಮಿಳುನಾಡಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 9ಕ್ಕೇರಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ತುರ್ತುಕ್ರಮ ತೆಗೆದುಕೊಂಡಿದೆ.