ತಿರುವನಂತಪುರ: ಲಾಕ್ಡೌನ್ ಸಂಕಷ್ಟದ ನಡುವೆಯೂ ಕೇರಳ ರಾಜ್ಯ ವಿದ್ಯುತ್ ಮಂಡಳಿಯು (ಕೆಎಸ್ಇಬಿ) ತನ್ನ ಗ್ರಾಹಕರಿಗೆ ದುಬಾರಿ ಬಿಲ್ ಮೂಲಕ ಶಾಕ್ ನೀಡಿದೆ.
ಸಾವಿರಾರು ಗ್ರಾಹಕರಿಗೆ ಭಾರಿ ಮೊತ್ತದ ವಿದ್ಯುತ್ ಬಿಲ್ ಬಂದಿದ್ದು, ಖಾಲಿ ಮನೆಗಳಿಗೆ ಕೂಡ ದುಬಾರಿ ಬಿಲ್ ನೀಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಈ ಕುರಿತು ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ದೂರುಗಳು ಬಂದಿವೆ ಎಂದು ಕೆಎಸ್ಇಬಿ ಮೂಲಗಳು ತಿಳಿಸಿವೆ.
ಲಾಕ್ಡೌನ್ ಆರಂಭವಾದ ಬಳಿಕ ಗೃಹಬಳಕೆಯ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ ಬಿಲ್ ಬಂದಿದೆ. ಗ್ರಾಹಕರ ಬಳಕೆಯ ಸರಾಸರಿಯ ಆಧಾರದ ಮೇಲೆ ಲೆಕ್ಕ ಹಾಕುವಾಗ ಲೋಪವಾಗಿದೆ ಎಂದು ಜನರು ಆರೋಪಿಸಿದ್ದಾರೆ.
ಮಲಯಾಳ ಚಿತ್ರನಟ ಮಧುಪಾಲ್ ಅವರ ತಿರುವನಂತಪುರದಲ್ಲಿರುವ ಮನೆಗೆ ಲಾಕ್ಡೌನ್ ಅವಧಿಯಲ್ಲಿ ಬೀಗ ಹಾಕಲಾಗಿತ್ತು. ಆದರೂ ಅವರಿಗೆ ₹ 5,714 ವಿದ್ಯುತ್ ಬಿಲ್ ಬಂದಿತ್ತು. ಈ ಬಗ್ಗೆ ದೂರು ನೀಡಿದ ಬಳಿಕ ಬಿಲ್ ಅನ್ನು ₹300ಕ್ಕೆ ಇಳಿಸಲಾಗಿದೆ.
‘ಸಾಮಾನ್ಯವಾಗಿ ₹ 7,000 ವಿದ್ಯುತ್ ಬಿಲ್ ಬರುತ್ತಿತ್ತು. ಲಾಕ್ಡೌನ್ ಅವಧಿಯಲ್ಲಿ ಅದು ₹42,000ಕ್ಕೆ ಏರಿಕೆಯಾಗಿದೆ’ ಎಂದು ಇನ್ನೊಬ್ಬ ಚಿತ್ರನಟ ಮಣಿಯನ್ ಪಿಳ್ಳೆ ರಾಜು ದೂರಿದ್ದಾರೆ.
‘ವಿದ್ಯುತ್ ಬಿಲ್ಗಳಲ್ಲಿ ನ್ಯೂನತೆಗಳಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಕೆಎಸ್ಇಬಿ ಅಧ್ಯಕ್ಷ ಎನ್.ಎಸ್.ಪಿಳ್ಳೆ ಹೇಳಿದ್ದಾರೆ.