ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತ್ಯೇಕತಾವಾದಿ ಮುಖಂಡ ಮಿರ್ವಾಯಿಜ್ ಉಮರ್ ಫಾರೂಕ್ ಸೋಮವಾರ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಮುಂದೆ ವಿಚಾರಣೆಗೆ ಹಾಜರಾದರು.
ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಉಮರ್ ಫಾರೂಕ್ ಅವರನ್ನು ಬಿಗಿ ಭದ್ರತೆಯಲ್ಲಿ ಎನ್ಐಎ ಕಚೇರಿಗೆ ಕರೆತರಲಾಯಿತು. ಹುರಿಯತ್ ಸಂಘಟನೆ ಮುಖಂಡರಾದ ಅಬ್ದುಲ್ ಗನಿ ಭಟ್, ಬಿಲಾಲ್ ಲೋಲ್, ಮೌಲಾನ ಅಬ್ಬಾಸ್ ಅನ್ಸಾರಿ ಅವರು ಫಾರೂಕ್ ಜೊತೆಗಿದ್ದರು.
2004ರಲ್ಲಿ ಈ ಸಂಘಟನೆಯ ಮುಖಂಡರು ಕಾಶ್ಮೀರದ ಸಮಸ್ಯೆಗಳ ಕುರಿತು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತುಗೃಹಸಚಿವ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.
ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವಿನ ಜೊತೆಗೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತುಗಳನ್ನು ಹಾನಿಗೊಳಿಸುವುದುಕಾಶ್ಮೀರದಲ್ಲಿ ಸಾಮಾನ್ಯವಾಗಿದೆ. ಈ ಕೃತ್ಯಗಳ ಹಿಂದಿನ ಸಂಚುಕೋರರನ್ನು ಗುರುತಿಸಲುಎನ್ಐಎ ತನಿಖೆ ನಡೆಸುತ್ತಿದೆ.