ನವದೆಹಲಿ: ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭೆಗೆ ಶುಕ್ರವಾರ ನಡೆಯುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಶಾಸಕರು ಪಕ್ಷಾಂತರ ಮಾಡಬಹುದು ಎಂಬ ಭೀತಿಯಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್, ಮತ್ತು ಬಿಜೆಪಿ ಪಕ್ಷಗಳು ತನ್ನ ಶಾಸಕರನ್ನು ಹೋಟೆಲ್ನಲ್ಲಿ ಇರಿಸಿವೆ. ಗುಜರಾತ್ನಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಅಡ್ಡಮತದಾನದ ಭೀತಿ ಎದುರಾಗಿದೆ.
ರಾಜ್ಯಸಭಾ ಚುನಾವಣೆಯ ಮೂರು ಸ್ಥಾನಗಳ ಗೆಲುವಿಗಾಗಿ ಅಂತಿಮ ಹಂತದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಗುರುವಾರ ಸಭೆಗಳನ್ನು ನಡೆಸಿ, ಕಾರ್ಯತಂತ್ರ ರೂಪಿಸುವ ಕಾರ್ಯದಲ್ಲಿ ತೊಡಗಿದ್ದವು.
ಚುನಾವಣೆ ಹತ್ತಿರವಾಗಿರುವ ಬೆನ್ನಲ್ಲೇ, ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಮಣಿಪುರದಲ್ಲಿ ರಾಜ್ಯಸಭೆಯ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಇಲ್ಲಿ ಬಿಜೆಪಿ ಮೈತ್ರಿಕೂಟದ ನಾಲ್ವರು ಸಚಿವರು ಸೇರಿದಂತೆ ಒಂಬತ್ತು ಶಾಸಕರು ಬುಧವಾರ ರಾಜೀನಾಮೆ ಸಲ್ಲಿಸಿದ್ದು, ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.