ನವದೆಹಲಿ:ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದಲೂ ಕಣಕ್ಕಿಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರು ಎನ್ಡಿಎ ಮಿತ್ರಪಕ್ಷ ಭಾರತ್ ಧರ್ಮ ಜನಸೇನಾ (ಬಿಡಿಜೆಎಸ್) ಮುಖ್ಯಸ್ಥ ತುಷಾರ್ ವೇಳಾಪಳ್ಳಿ ಅವರು ಸ್ಪರ್ಧಿಸಲಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಟ್ವೀಟ್ ಮಾಡಿದ್ದಾರೆ.
‘ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ನಮ್ಮ ಬದ್ಧತೆಯನ್ನುಉತ್ಸಾಹಿ, ಕ್ರಿಯಾಶೀಲ ಯುವ ನಾಯಕ ತುಷಾರ್ ಪ್ರತಿನಿಧಿಸಲಿದ್ದಾರೆ. ಇವರೊಂದಿಗೆ ಎನ್ಡಿಎಯು ಕೇರಳದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ.
ರಾಹುಲ್ ವಯನಾಡ್ನಿಂದ ಕಣಕ್ಕಿಳಿದಲ್ಲಿ ತುಷಾರ್ ಅವರೂ ತ್ರಿಶೂರ್ಗೆ ಬದಲಾಗಿ ವಯನಾಡ್ನಿಂದಲೇ ಕಣಕ್ಕಿಳಿಯಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು.
ತುಷಾರ್ ಅವರು ‘ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೇಳಾಪಳ್ಳಿ ನಟೇಶನ್ ಅವರ ಮಗ. ನಟೇಶನ್ ಅವರು 2015ರಲ್ಲಿ ಬಿಡಿಜೆಎಸ್ ಸ್ಥಾಪಿಸಿದ್ದಾರೆ. ಈ ಪಕ್ಷವು ಇದೇ ಮೊದಲ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.