ಕೊಲ್ಕತ್ತಾ: 'ಕೊರೊನಾ ಎಕ್ಸ್ಪ್ರೆಸ್ ಪದವನ್ನು ನಾನು ಮೊದಲು ಬಳಸಲಿಲ್ಲ. ಜನರು ಹಾಗೆ ಹೇಳುತ್ತಿದ್ದಾರೆ ಎಂದಷ್ಟೇ ಹೇಳಿದೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ 'ಜನ ಸಂವಾದ' ವರ್ಚುಯಲ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಮಮತಾ ದೀದಿ ನೀವು ನಾಮಕರಣ ಮಾಡಿದ ಕೊರೊನಾ ಎಕ್ಸ್ಪ್ರೆಸ್ ಹೆಸರು ನಿಮ್ಮ ಎಕ್ಸಿಟ್ ಎಕ್ಸ್ಪ್ರೆಸ್ ಆಗಲಿದೆ' ಎಂದು ಟೀಕಿಸಿದ್ದರು.
ಇದೀಗ ಅಮಿತ್ ಶಾ ಟೀಕೆಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, 'ಲಾಕ್ಡೌನ್ ಘೋಷಣೆಯಾಗುವ ಒಂದು ವಾರ ಮೊದಲು ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಕೇಂದ್ರ ಸರ್ಕಾರ ಓಡಿಸಿದ್ದರೆ ಕಾರ್ಮಿಕರು ಮೂರು ತಿಂಗಳು ಪಾಡು ಪಡಬೇಕಾಗಿರಲಿಲ್ಲ' ಎಂದು ಹೇಳಿದ್ದಾರೆ.
ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಬರುವ ವಲಸೆ ಕಾರ್ಮಿಕರ ಕ್ವಾರಂಟೈನ್ ಅವಧಿಯನ್ನು ಒಂದು ವಾರಕ್ಕೆ ಇಳಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳಿಗೆ ಶ್ರಮಿಕ್ ಸ್ಪೆಷಲ್ ರೈಲುಗಳು ಕಾರಣ. ಅವು 'ಕೊರೊನಾ ಎಕ್ಸ್ಪ್ರೆಸ್'ಗಳು ಮಮತಾ ಟೀಕಿಸಿದ್ದರು.
ಲಾಕ್ಡೌನ್ ಘೋಷಣೆಯಾದ ನಂತರ ಈವರೆಗೆ 11 ಲಕ್ಷ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ ಪ್ರವೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 22 ರೈಲುಗಳಲ್ಲಿ 30 ಸಾವಿರ ಮಂದಿ ಪಶ್ಚಿಮ ಬಂಗಾಳಕ್ಕೆ ಬರಲಿದ್ದಾರೆ. ಒಟ್ಟು 255 ಶ್ರಮಿಕ್ ಸ್ಪೆಷಲ್ ರೈಲುಗಳು ಪಶ್ಚಿಮ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಕರೆತಂದಿವೆ.