ನವದೆಹಲಿ:‘ಹೆದ್ದಾರಿಗಳ ಇಕ್ಕೆಲದಲ್ಲಿ ಮರಗಳನ್ನು ಬೆಳೆಸುವ ಮತ್ತು ವಿಭಜಕದಲ್ಲಿ ಗಿಡಗಳನ್ನು ಬೆಳೆಸುವ ಬಗ್ಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ನಿರ್ದೇಶನ ನೀಡಿದೆ.
ಒಂದು ತಿಂಗಳ ಒಳಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ. ಮೂರು ತಿಂಗಳ ಒಳಗೆ ಅದನ್ನು ಅನುಷ್ಠಾನಗೊಳಿಸಿ. 2019ರ ಫೆಬ್ರುವರಿಯಲ್ಲಿ ವಸ್ತುಸ್ಥಿತಿ ವರದಿಯನ್ನು ನೀಡಿ ಎಂದು ಎನ್ಜಿಟಿ ಸೂಚಿಸಿದೆ.
ಇತರ ನಿರ್ದೇಶನಗಳು
* ಹೆದ್ದಾರಿ ನಿರ್ಮಾಣದ ವೇಳೆ ಮರಗಳನ್ನು ಕಡಿಯುವ ಬದಲು ಅವನ್ನು ಬೇರೆಡೆ ಕಸಿ ಮಾಡಬೇಕು. ಜತೆಗೆ ಹೊಸ ಸಸಿಗಳನ್ನೂ ನೆಡಬೇಕು. ಇದಕ್ಕಾಗಿ ಹೆದ್ದಾರಿ ಸಮೀಪದಲ್ಲೇ ಜಾಗವನ್ನು ಮೀಸಲಿರಿಸಬೇಕು. ಈಗ ಸದ್ಯ ದೇಶದಲ್ಲಿ 700 ಹೆದ್ದಾರಿಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಯೋಜನೆಗಳ ಒಳಗೇ ಈ ಅಂಶಗಳನ್ನು ಸೇರಿಸಿ
* ಹೆದ್ದಾರಿಗಳು ಅರಣ್ಯಪ್ರದೇಶವನ್ನು ಹಾದುಹೋಗುವಂತಿದ್ದರೆ, ಹೆದ್ದಾರಿಯ ಇಕ್ಕೆಲದಲ್ಲಿ ಎತ್ತರದ ಗೋಡೆಗಳನ್ನು ನಿರ್ಮಿಸಬೇಕು. ಕಾಡುಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾಯುವುದನ್ನು ಈ ಮೂಲಕ ತಡೆಯಬಹುದು
* ಹೆದ್ದಾರಿಗಳ ಇಕ್ಕೆಲದಲ್ಲಿರುವ ವಸತಿ ಅಥವಾ ವಾಣಿಜ್ಯ ಕಟ್ಟಡಗಳ ಪ್ರವೇಶದ ದಾರಿಗಳು ಹೆದ್ದಾರಿಗೆ ನೇರವಾಗಿ ಜೋಡಣೆಯಾಗಿರಬಾರದು. ಇಂತಹ ಹಾದಿಗಳು ಸರ್ವಿಸ್ ರಸ್ತೆಗೆ ಸಂಪರ್ಕ ಪಡೆಯಬೇಕು. ಆನಂತರ ಹೆದ್ದಾರಿಗೆ ಸಂಪರ್ಕ ಹೊಂದಿರಬೇಕು
* ಹೆದ್ದಾರಿಗಳ ಇಕ್ಕೆಲದಿಂದ ನಿಗದಿತ ದೂರದಲ್ಲೇ ಕಟ್ಟಡಗಳನ್ನು ನಿರ್ಮಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲು ನಿಯಮಾವಳಿಗಳನ್ನು ರಚಿಸಿ. ಹೆದ್ದಾರಿಗಳ ಒತ್ತುವರಿಯನ್ನು ತೆರವು ಮಾಡಲು ಮೂವರು ಉನ್ನತಾಧಿಕಾರಿಗಳ ತಂಡವನ್ನು ರಚಿಸಿ. ಅಗತ್ಯವಿರುವಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.