ಲಖನೌ: ‘ಕೊರೊನಾ ಸೋಂಕು ಬಿಕ್ಕಟ್ಟು ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉತ್ತಮ ಕೆಲಸ ಮಾಡಿದ್ದಾರೆ. ಇದರಿಂದಾಗಿ ಸುಮಾರು 85 ಸಾವಿರ ಜನರ ಜೀವ ರಕ್ಷಣೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
‘ಇಂಥ ಸಾಧ್ಯತೆಗಳನ್ನು 2017ಕ್ಕೂ ಮೊದಲು ಊಹಿಸಲೂ ಸಾಧ್ಯವಿರಲಿಲ್ಲ’ ಎಂದು ಪ್ರಧಾನಿ ಹೇಳಿದರು. ಸ್ಥಳೀಯವಾಗಿ ಉದ್ಯಮಗಳಿಗೆ ಉತ್ತೇಜನ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಸಂಬಂಧಿಸಿದ ‘ಆತ್ಮನಿರ್ಭರ ಉತ್ತರ ಪ್ರದೇಶ ರೋಜಗಾರ್ ಅಭಿಯಾನ’ಕ್ಕೆ ವಿಡಿಯೊ ಕಾನ್ಫರೆನ್ಸ್ನಲ್ಲಿ ಚಾಲನೆ ನೀಡಿ ಮಾತನಾಡಿದರು.
2017ಕ್ಕೂ ಮೊದಲು ಇದ್ದ ಬಿಜೆಪಿಯೇತರ ಸರ್ಕಾರಗಳನ್ನು ಉಲ್ಲೇಖಿಸಿದ ಅವರು, ‘ಯಾವುದೇ ಸರ್ಕಾರ, ವ್ಯವಸ್ಥೆ ಇದ್ದರೂ ಇಂಥದೊಂದು ಸವಾಲು ಎದುರಿಸಬೇಕಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರ ಕೋವಿಡ್ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿತು’ ಎಂದರು.
ಐರೋಪ್ಯ ಒಕ್ಕೂಟದ ನಾಲ್ಕು ರಾಷ್ಟ್ರಗಳ ಜನಸಂಖ್ಯೆಗೆ ಸಮನಾದ ಜನಸಂಖ್ಯೆ ಉತ್ತರ ಪ್ರದೇಶದಲ್ಲಿದೆ. ಆದರೆ, ಇಲ್ಲಿ ಕೋವಿಡ್ನಿಂದ ಸುಮಾರು 600 ಜನರಷ್ಟೇ ಸತ್ತಿದ್ದಾರೆ ಎಂದು ಮೋದಿ ಹೇಳಿದರು.