ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಹಗರಣ, ರಾಮಮಂದಿರ ನಿರ್ಮಾಣ ಹಾಗೂ ಕಾವೇರಿ ವಿಚಾರವಾಗಿ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು.
ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಬುಧವಾರ ರಾಜ್ಯಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿಲ್ಲ. ‘ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಅಸ್ವಸ್ಥತೆ ಹಾಗೂ ಬಹುವಿಕಲಾಂಗ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಅಭಿವೃದ್ಧಿ ಟ್ರಸ್ಟ್ ತಿದ್ದುಪಡಿ ಮಸೂದೆ’ಗೆ ಪ್ರತಿಭಟನೆ ನಡುವೆಯೇ ಅಂಗೀಕಾರ ದೊರೆಯಿತು.
ರಫೇಲ್ ಖರೀದಿ ಸಂಬಂಧ ಜಂಟಿ ಸಂಸದೀಯ ಸಮಿತಿ ರಚನೆಗೆ ಕಾಂಗ್ರೆಸ್ ಪಟ್ಟು ಹಿಡಿಯಿತು. ಅಯೋಧ್ಯೆಯಲ್ಲಿ ತಕ್ಷಣ ರಾಮಮಂದಿರ ನಿರ್ಮಿಸುವಂತೆ ಶಿವಸೇನಾ ಧರಣಿ ನಡೆಸಿತು. ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನ್ಯಾಯ ದೊರಕಿಸುವಂತೆ ಎಐಎಡಿಎಂಕೆ ಆಗ್ರಹಿಸಿತು. ವಿಶಾಖಪಟ್ಟಣದಲ್ಲಿ ರೈಲ್ವೆ ವಲಯ ಕಚೇರಿ ತೆರೆಯುವಂತೆ ಟಿಡಿಪಿ ಸದಸ್ಯರು ಒತ್ತಾಯಿಸಿದರು.
ಕಾವೇರಿ ವಿಚಾರವಾಗಿ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಪ್ರತಿಭಟನೆ ನಡೆಸಿದವು.