ನವದೆಹಲಿ: ನೈಸರ್ಗಿಕ ಸಂಪನ್ಮೂಲಗಳ ಪರಿಸರ ಸ್ನೇಹಿ ಬಳಕೆ ಖಾತ್ರಿಪಡಿಸಲು ಮುಗಿದು ಹೋಗುವ ಇಂಧನ ಬಳಕೆ ಮತ್ತು ಸಂಸ್ಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಸರ ತಜ್ಞರು ಜಾರಿಗೊಳಿಸಬಹುದಾದ ಚಿಂತನೆಗೊಂದಿಗೆ ಮುಂದೆ ಬರಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ಕರೆ ನೀಡಿದ್ದಾರೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಆಯೋಜಿಸಿದ್ದ ‘ಇಂಧನ ಮತ್ತು ಪರಿಸರ: ಸವಾಲುಗಳು ಮತ್ತು ಅವಕಾಶಗಳು (ಇಎನ್ಸಿಒ 2019)’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾತ್ರವಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಪರಿಸರದ ಕಾಳಜಿ ಇರಬೇಕು. ನೈಸರ್ಗಿಕ ಸಂಪನ್ಮೂಲವನ್ನು ಪರಿಸರ ಸ್ನೇಹಿಯಾಗಿ ಬಳಕೆ ಮಾಡಲು ಸಾಂಪ್ರದಾಯಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರು ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ಭಾರತವು ಸೇರಿದಂತೆ ಹೆಚ್ಚಿನ ರಾಷ್ಟ್ರಗಳಿಗೆ ಕಲ್ಲಿದ್ದಲು ಪ್ರಮುಖ ಶಕ್ತಿ ಮೂಲವಾಗಿದೆ. ಹಸಿರು ಗಣಿಗಾರಿಕೆಗಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ಧಿಪಡಿಸುವ ಅಗತ್ಯವೂ ಇದೆ. ಕಾರ್ಬನ್ ಹೊರಸೂಸುವಿಕೆ ನಿಯಂತ್ರಿಸುವ ಪ್ಯಾರಿಸ್ ಒಪ್ಪಂದಕ್ಕೆ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.