ಅಮೇಥಿ: ಪ್ರಧಾನಿ ನರೇಂದ್ರ ಮೋದಿ ಮೊದಲಿನಿಂದಲೂ ಉದ್ಯಮಿಗಳ ಕಡೆ ಒಲವು ತೋರುತ್ತಿದ್ದು, ಅವರು ಮಾತನಾಡುವ ‘ಅಚ್ಛೇ ದಿನ್’ ಎಲ್ಲಿದೆ? ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಲೋಕಸಭಾ ಚುನಾವಣಾ ಕ್ಷೇತ್ರ ಅಮೇಥಿಯಲ್ಲಿ ಎರಡು ದಿನಪ್ರವಾಸ ಕೈಗೊಂಡಿದ್ದು, ಈ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು ಅಮೇಥಿಯಲ್ಲಿ ಕೈಗೊಳ್ಳಬೇಕಾದ ಸಾಕಷ್ಟು ಯೋಜನೆಗಳ ಪಟ್ಟಿಯನ್ನು ಮುಂದಿಡುತ್ತೇನೆ. ಇಲ್ಲಿ ನಿರ್ಮಾಣವಾಗಬೇಕಾಗಿರುವ ಆಹಾರ ಮಾರುಕಟ್ಟೆ ಲಕ್ಷಾಂತರ ಜನರಿಗೆ ಉದ್ದೋಗಾವಕಾಶ ನೀಡಲಿದೆ. ಆದರೆ, ಈ ವಿಚಾರದಲ್ಲಿ ಅಮೇಥಿ ಹಾಗೂ ಉತ್ತರಪ್ರದೇಶದ ಜನರಿಗೆ ಮೋದಿ ವಂಚಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅಮೇಥಿಯಲ್ಲಿ ಮೋದಿ ಕೈಗೊಳ್ಳದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಿದೆ ಎಂದು ಭರವಸೆ ನೀಡಿದರು.
ಸದ್ಯದಲ್ಲೇ ಅಮೇಥಿಯಲ್ಲಿ ಆಹಾರ ಮಾರುಕಟ್ಟೆ ನಿರ್ಮಿಸುವ ಬಗ್ಗೆ ಭರವಸೆ ನೀಡಿದ ರಾಹುಲ್, ಅಕಸ್ಮಾತ್ ಬಿಜೆಪಿ ಕಾರ್ಯಕರ್ತರು ಮತಯಾಚಿಸಲು ಬಂದಲ್ಲಿ, ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತದ ಅವಶ್ಯಕತೆ ಇಲ್ಲ ಎಂದು ಹೇಳಿಬಿಡಿ ಎಂದು ಮತದಾರರಿಗೆ ಸಲಹೆ ನೀಡಿದರು.
ನೋಟು ರದ್ಧತಿ ಬಿಜೆಪಿಯ ಬಹುದೊಡ್ಡ ಹಗರಣ. ಈ ವೇಳೆ ಸರದಿಯಲ್ಲಿ ನಿಂತು ಹೈರಾಣಗಿದ್ದು ಬಡವರೇ ಹೊರತು ಉದ್ಯಮಿಗಳಲ್ಲ ಎಂದು ಟೀಕಿಸಿದ್ದಾರೆ.
ಸಿಬಿಐ ನಿರ್ದೇಶಕ ಹುದ್ದೆಯಿಂದ ಅಲೋಕ್ ವರ್ಮಾ ಅವರನ್ನುಆತುರದಲ್ಲಿ ತಡರಾತ್ರಿ ವಜಾ ಮಾಡಿದ್ದು ಯಾಕೆ? ಬಿಜೆಪಿಯ ನಡೆಯನ್ನು ಖಂಡಿಸಿದ್ದ ಸುಪ್ರೀಂ ಕೋರ್ಟ್ ಪುನಃ ವರ್ಮಾ ಅವರನ್ನು ಅಧಿಕಾರಕ್ಕೆ ಕರೆತರುವಂತೆ ಸೂಚಿಸಿದ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.