ಹೈದರಾಬಾದ್: ‘ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ಗವರ್ನರ್ ಶಕ್ತಿಕಾಂತ್ ದಾಸ್ ಒಬ್ಬ ದೊಡ್ಡ ಭ್ರಷ್ಟ’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಶನಿವಾರ ಆರೋಪ ಮಾಡಿದ್ದಾರೆ.
ಭ್ರಷ್ಟಾಚಾರ ಆರೋಪ ಹೊತ್ತ ದಾಸ್ ಅವರನ್ನು ಆರ್ಬಿಐ ಗವರ್ನರ್ ಅಂತಹ ದೊಡ್ಡ ಹುದ್ದೆಗೆ ಸರ್ಕಾರ ನೇಮಕ ಮಾಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದಾರೆ.
‘ಹಣಕಾಸು ಸಚಿವಾಲಯದಲ್ಲಿದ್ದ ಶಕ್ತಿಕಾಂತ್ ದಾಸ್ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ನಾನೇ ತೆಗೆದು ಹಾಕಿದ್ದೆ. ಅಂಥ ವ್ಯಕ್ತಿಯನ್ನು ಆರ್ಬಿಐ ಗವರ್ನರ್ ಮಾಡಲಾಗಿದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ವಿದ್ಯಾರ್ಥಿಗಳ ಜತೆ ನಡೆಸಿದ ಸಂವಾದದಲ್ಲಿ ಅವರು ದಾಸ್ ವಿರುದ್ಧ ಹರಿಹಾಯ್ದರು. ಆದರೆ, ದಾಸ್ ವಿರುದ್ಧಯಾವ ರೀತಿಯ ಭ್ರಷ್ಟಾಚಾರ ಆರೋಪಗಳಿವೆ ಎಂದು ವಿವರಿಸಲಿಲ್ಲ.
‘ಬೆಂಗಳೂರಿನ ಐಐಎಂನಲ್ಲಿ ಹಣಕಾಸು ವಿಭಾಗದ ಮಾಜಿ ಪ್ರಾಧ್ಯಾಪಕ ಆರ್. ವೈದ್ಯನಾಥನ್ ಆರ್ಬಿಐ ಗವರ್ನರ್ ಹುದ್ದೆಗೆ ಸೂಕ್ತ ವ್ಯಕ್ತಿಯಾಗುತ್ತಿದ್ದರು. ಮೇಲಾಗಿ ವೈದ್ಯನಾಥನ್ ಆರ್ಎಸ್ಎಸ್ ಕಾರ್ಯಕರ್ತ.ನಮ್ಮ ವ್ಯಕ್ತಿ’ ಎಂದು ಸ್ವಾಮಿ ಹೇಳಿದ್ದಾರೆ.