ನವದೆಹಲಿ: ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪುಣೆಯ ಭೂಸ್ವಾಧೀನದಲ್ಲಿ ಪರಿಹಾರ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಐವರು ಸದಸ್ಯರ ಸಂವಿಧಾನ ಪೀಠ ನಡೆಸುತ್ತಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಈ ಪೀಠದಲ್ಲಿ ಇದ್ದಾರೆ.
ಅರುಣ್ ಅವರು 2018ರಲ್ಲಿ ಇಂಥದ್ದೇ ಪ್ರಕರಣದಲ್ಲಿ ತೀರ್ಪು ನೀಡಿದ್ದರು. ಹೀಗಾಗಿ ಅಂತಹದ್ದೇ ಪ್ರಕರಣದ ವಿಚಾರಣೆಯಿಂದ ಅವರು ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ.
‘ನ್ಯಾಯಮೂರ್ತಿಗೇ ಹೀಗೆ ಕಳಂಕ ತರುವುದಾದರೆ, ಮುಂದೆ ಸುಪ್ರೀಂ ಕೋರ್ಟ್ನ ಸ್ಥಿತಿ ಏನಾಗುತ್ತದೆ’ ಎಂದು ಪೀಠವು ಪ್ರಶ್ನಿಸಿದೆ.
‘ಈ ಪೀಠದಲ್ಲಿ ಇರುವ ಐವರು ನ್ಯಾಯಮೂರ್ತಿಗಳೂ ಒಂದಲ್ಲ ಒಂದು ಬಾರಿ ಭೂಸ್ವಾಧೀನ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಹಾಗೆಂದು ಅವರೆಲ್ಲರೂ ಈ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯಬೇಕೇ’ ಎಂದು ಪೀಠವು ಪ್ರಶ್ನಿಸಿದೆ.