ನವದೆಹಲಿ: ರಾಜ್ಯಸಭೆಯಲ್ಲಿ ತೆರವಾಗಿರುವ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪಚುನಾವಣೆ ನಡೆಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ನ ಗುಜರಾತ್ ಘಟಕ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಜೂನ್ 24ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸೂರ್ಯಕಾಂತ ಅವರನ್ನು ಒಳಗೊಂಡ ರಜಾಕಾಲದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿತು.
‘ಕೇವಲ ಚುನಾವಣಾ ತಕರಾರು ಅರ್ಜಿಯನ್ನಷ್ಟೇ ಪರಿಗಣಿಸಿ ತೀರ್ಪು ನೀಡುವಂತಹ ಪ್ರಕರಣ ಇದಲ್ಲ. ಹೀಗಾಗಿ ಅರ್ಜಿಯ ವಿಚಾರಣೆ ನಡೆಸಬೇಕಾಗುತ್ತದೆ’ ಎಂದು ಪೀಠ ಹೇಳಿದೆ.
ಬಿಜೆಪಿಯ ಅಮಿತ್ ಶಾ, ಸ್ಮೃತಿ ಇರಾನಿ ಲೋಕಸಭೆಗೆ ಆಯ್ಕೆಗೊಂಡ ಕಾರಣ ರಾಜ್ಯಸಭೆಯಎರಡು ಸ್ಥಾನಗಳು ತೆರವಾಗಿವೆ. ಈ ಸ್ಥಾನಗಳಿಗಾಗಿ ಪ್ರತ್ಯೇಕವಾಗಿ ಉಪಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ ಆಯೋಗದ ಕ್ರಮ ಪ್ರಶ್ನಿಸಿ ಗುಜರಾತ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಪರೇಶ್ಭಾಯಿ ಧನಾನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.