ಅಹಮದಾಬಾದ್: ಆರ್ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಳಂಕಿ ಹಾಗೂ ಇತರ ಆರು ಮಂದಿಗೆ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2010ರಲ್ಲಿ ಗಿರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಬಹಿರಂಗಪಡಿಸಲು ಯತ್ನಿಸಿದ್ದ ವಕೀಲ ಅಮಿತ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಸೋಳಂಕಿ ಹಾಗೂ ಅತನ ಸಂಬಂಧಿ ಶಿವ ಸೋಳಂಕಿಗೆ ನ್ಯಾಯಾಲಯ ತಲಾ ₹15 ಲಕ್ಷ ದಂಡ ವಿಧಿಸಿದೆ.
2009 ರಿಂದ 2014ರ ವರೆಗೆ ಜುನಾಗಡದ ಸಂಸದರಾಗಿದ್ದ ಸೋಳಂಕಿ ಹಾಗೂ ಶಿವ ಸೋಳಂಕಿ ಈ ಕೊಲೆಯ ಪಿತೂರಿ ನಡೆಸಿದ್ದರು ಎಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು. ಅಲ್ಲದೆ ಎಲ್ಲ ಏಳು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿತ್ತು.
ಆರಂಭದಲ್ಲಿ ತನಿಖೆ ನಡೆಸಿದ್ದ ಅಹಮದಾಬಾದ್ನ ಅಪರಾಧ ತನಿಖೆ ವಿಭಾಗದ ಪೊಲೀಸರು ಈ ಪ್ರಕರಣದಲ್ಲಿ ದಿನು ಸೋಳಂಕಿ ಅಪರಾಧಿ ಅಲ್ಲ ಎಂದಿದ್ದರು. ಬಳಿಕ ನ್ಯಾಯಾಲಯವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಸೋಳಂಕಿ ಹಾಗೂ ಇತರ ಆರು ಮಂದಿಯ ವಿರುದ್ಧ 2013 ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.