ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ರದ್ದು ಪಡಿಸಬೇಕೆಂದು ಕೋರಿ ತೆಹಲ್ಕಾ ನಿಯತಕಾಲಿಕೆ ಸಂಸ್ಥಾಪಕ ತರುಣ್ ತೇಜ್ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
2013ರಲ್ಲಿ ಗೋವಾದ ಪಂಚತಾರಾ ಹೋಟೆಲ್ನ ಲಿಫ್ಟ್ನೊಳಗೆ ತರುಣ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಮಹಿಳಾ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗೋವಾದ ನ್ಯಾಯಾಲಯಕ್ಕೆ ಸೂಚಿಸಿದೆ.
2013 ನವೆಂಬರ್ನಲ್ಲಿ ತರುಣ್ ಅವರನ್ನು ಪೊಲೀಸರು ಬಂಧಿಸಿದ್ದರು. 2014 ಮೇ ತಿಂಗಳಲ್ಲಿ ಅವರು ಜಾಮೀನಿನಲ್ಲಿ ಹೊರಬಂದಿದ್ದರು.
ಸೆ.23ರಿಂದ ವಿಚಾರಣೆ ಪುನರಾರಂಭ: ತರುಣ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಗೋವಾದ ನ್ಯಾಯಾಲಯವು ಸೆಪ್ಟೆಂಬರ್ 23ರಿಂದ ಪುನರಾರಂಭಿಸಲಿದೆ.
ತರುಣ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬಳಿಕ, ಉತ್ತರ ಗೋವಾದ ಜಿಲ್ಲಾ ನ್ಯಾಯಾಧೀಶರು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿ ಪಡಿಸಿದ್ದಾರೆ.