ಕೋಲ್ಕತ್ತ: ‘ಜೈ ಶ್ರೀರಾಂ’ ಘೋಷಣೆ ಕೂಗಿದ್ದಕ್ಕಾಗಿ ತಮ್ಮನ್ನು ಬಂಧಿಸುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಸರಣಿ ರ್ಯಾಲಿಗಳನ್ನು ನಡೆಸಿದ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಅವರಿಗೆ, ‘ಜೈ ಶ್ರೀರಾಂ ಘೋಷಣೆಯನ್ನು ಪಶ್ಚಿಮ ಬಂಗಾಳದಲ್ಲಿ ಅಲ್ಲದೆ, ಪಾಕಿಸ್ತಾನದಲ್ಲಿ ಕೂಗಬೇಕೇ’ ಎಂದು ಪ್ರಶ್ನಿಸಿದರು.
‘ನಾನು ಇಂದು ಇಲ್ಲಿಗೆ ಬಂದಿದ್ದೇನೆ ಮತ್ತು ಜೈ ಶ್ರೀರಾಂ ಹೇಳುತ್ತೇನೆ. ಮಮತಾ ದೀದಿ ಸಾಧ್ಯವಿದ್ದರೆ ನನ್ನನ್ನು ಬಂಧಿಸಿ. ನಿಮಗೆ ಧೈರ್ಯವಿದ್ದರೆ ನನಗೆ ಜೈಲಿಗೆ ಹಾಕಿ’ ಎಂದು ಶಾ ಸವಾಲು ಹಾಕಿದರು. ಬಂಕುರಾ ಜಿಲ್ಲೆಯಲ್ಲಿ ಅವರು ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು.
‘ಜೈ ಶ್ರೀರಾಂ’ ಎಂದು ಕೂಗಿದ ಕೆಲವರನ್ನು ಕಾರಿನಿಂದ ಇಳಿದು ಮಮತಾ ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೊ ಉಲ್ಲೇಖಿಸಿದ ಅವರು, ‘ಬಂಗಾಳದಲ್ಲಿ ಘೋಷಣೆ ಕೂಗುವುದನ್ನು ಮಮತಾ ತಪ್ಪಿಸಲಾಗದು’ ಎಂದರು.