ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮುಕುಲ್ರಾಯ್ ಅವರನ್ನು ಮಾರ್ಚ್ 7ರವರೆಗೆ ಬಂಧಿಸಬಾರದು ಎಂದು ಕಲ್ಕತ್ತ ಹೈಕೋರ್ಟ್ ಬುಧವಾರಪೊಲೀಸರಿಗೆ ನಿರ್ದೇಶಿಸಿತು.
‘ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಮುಂದಿನ ವಿಚಾರಣೆಯನ್ನು ಮಾರ್ಚ್ 5 ರಂದು ನಡೆಸಲಾಗುವುದು’ ಎಂದು ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ಎಂ.ಮಂಡಲ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
ತನಿಖೆ ಸಲುವಾಗಿ ಹಾಗೂ ಕೋರ್ಟ್ಗೆ ಹಾಜರಾಗುವುದನ್ನು ಹೊರತುಪಡಿಸಿ ಮುಂದಿನ ಆದೇಶದವರೆಗೆ ನಾಡಿಯಾ ಜಿಲ್ಲೆಗೆ ತೆರಳದಂತೆ ರಾಯ್ ಅವರಿಗೆ ವಿಭಾಗೀಯ ಪೀಠವು ಸೂಚಿಸಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ನಲ್ಲಿ ತಮ್ಮ ಹೆಸರು ದಾಖಲಾಗುತ್ತಿದ್ದಂತೆ ಮುಕುಲ್ ರಾಯ್ ಅವರು ಮಂಗಳವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ನಾಡಿಯಾ ಜಿಲ್ಲೆಯಲ್ಲಿ ಫೆಬ್ರುವರಿ 9 ರಂದು ಬಿಸ್ವಾಸ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಮರುದಿನವೇ ಆರೋಪಿಗಳಾದ ಕಾರ್ತಿಕ್ ಮಂಡಲ್ ಹಾಗೂ ಸುಜಿತ್ ಮಂಡಲ್ ಅವರನ್ನು ಬಂಧಿಸಿ, 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.