ಅಯೋಧ್ಯೆ: ಉತ್ತರ ಪ್ರದೇಶದಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಂದು ಮಧ್ಯಾಹ್ನ ಅಯೋಧ್ಯೆಗೆ ಭೇಟಿನೀಡಿ, ರಾಮಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲಿದ್ದಾರೆ. ಅಯೋಧ್ಯೆಯ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನೂ ಅವರು ಪರಿಶೀಲಿಸಲಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದ ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸಿದ ನಂತರ ಅಯೋಧ್ಯೆಗೆ ಆದಿತ್ಯನಾಥ್ ಅವರ ಎರಡನೇ ಭೇಟಿ ಇದಾಗಿದೆ. ಈ ಹಿಂದೆ ಮಾರ್ಚ್ 25ರಂದು ರಾಮಲಲ್ಲಾ ಮೂರ್ತಿಯನ್ನು ಹೊಸ ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಅವರು ಅಯೋಧ್ಯೆಗೆ ಭೇಟಿನೀಡಿದ್ದರು. ರಾಮ ಮಂದಿರ ನಿರ್ಮಾಣಕ್ಕಾಗಿ ಆದಿತ್ಯನಾಥ್ ಅವರು ವೈಯಕ್ತಿಕವಾಗಿ ₹ 11 ಲಕ್ಷ ದೇಣಿಗೆ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ 11.45ರ ಸುಮಾರಿಗೆ ಅವರು ಅಯೋಧ್ಯೆಗೆ ತಲುಪಲಿದ್ದಾರೆ. ಈ ಪ್ರದೇಶದಲ್ಲಿರುವ ಕೋವಿಡ್ಯೇತರ ಆಸ್ಪತ್ರೆಗಳು, ವಿವಿಧ ದೇವಸ್ಥಾನಗಳಿಗೆ ಅವರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.