ಭೋಪಾಲ್: ಮಧ್ಯ ಪ್ರದೇಶದ ಛಿಂದವಾಡಾ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛಿಂದವಾಡಾದ ಲೋಧಿಖೇಡಾ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಸುನಂದಾ ಕೋಟೇಕರ್(50) ಅವರಿಗೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಮುಖ್ಯ ಚುನಾವಣಾ ಅಧಿಕಾರಿ ವಿ.ಎಲ್.ಕಾಂತಾ ರಾವ್ ಹೇಳಿದ್ದಾರೆ.
’ಅವರಿಗೆ ವೈದ್ಯಕೀಯ ಸಹಕಾರ ಸಿಗುವುದಕ್ಕೂ ಮುನ್ನವೇ ಹೃದಯಾಘಾತದಿಂದ ಮೃತಪಟ್ಟರು. ಸುನಂದಾ ಹಾಗೂ ಮತ್ತೊಬ್ಬ ಚುನಾವಣಾ ಸಿಬ್ಬಂದಿ ಭಾನುವಾರ ಬೆಳಿಗ್ಗೆ ನಿಗದಿತ ಮತಗಟ್ಟೆ ತಲುಪಿದ್ದರು’ ಎಂದಿದ್ದಾರೆ.
ಛಿಂದವಾಡಾ ಲೋಕಸಭಾ ಕ್ಷೇತ್ರದೊಂದಿಗೆ ವಿಧಾನಸಭೆಗೆ ಉಪಚುನಾವಣೆಯೂ ನಡೆಯುತ್ತಿದೆ. ಇದೇ ಕ್ಷೇತ್ರದಿಂದ ಮುಖ್ಯಮಂತ್ರಿ ಕಮಲ್ ನಾಥ್ ಒಂಬತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸೋಮವಾರ ನಡೆಯುತ್ತಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ ಮಧ್ಯ ಪ್ರದೇಶದ ಆರು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.