ನೊಯಿಡಾ: ಮಹಿಳೆ, ವೃತ್ತಿ ಮತ್ತು ಕುಟುಂಬ ಎರಡನ್ನೂ ನಿಭಾಯಿಸಲು ಸಮರ್ಥಳು ಎಂಬ ಮಾತಿಗೆ ನಿದರ್ಶನವೊಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ಕಂಡುಬಂದಿತು.
ಈ ಕಾರ್ಯಕ್ರಮದಲ್ಲಿ ಭದ್ರತೆಗಾಗಿ ಹಲವು ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಕಾನ್ಸ್ಟೆಬಲ್ ಪ್ರೀತಿ ರಾಣಿ ಅವರು.
ಕಂಕುಳಿನಲ್ಲಿ ಒಂದೂವರೆ ವರ್ಷದ ಪುಟ್ಟ ಮಗು ಇರಿಸಿಕೊಂಡು ಕರ್ತವ್ಯವನ್ನು ನಿಭಾಯಿಸುತ್ತಿದ್ದ ರೀತಿ ವೃತ್ತಿ ಬದ್ಧತೆಯನ್ನು ಪ್ರದರ್ಶಿಸುವಂತಿತ್ತು.
‘ಮಗುವಿನ ತಂದೆ ಪರೀಕ್ಷೆ ಬರೆಯಲು ಹೋಗಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಮಗುವನ್ನು ಇಲ್ಲಿಗೆ ಕರೆದುಕೊಂಡು ಬರಬೇಕಾಯಿತು. ಕರ್ತವ್ಯ ನಿಭಾಯಿಸುವುದು ತುಂಬಾ ಮುಖ್ಯ’ ಎಂದು ಪ್ರೀತಿ ಹೇಳಿದ್ದಾರೆ.
₹1,452 ಕೋಟಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಯೋಗಿ ಆದಿತ್ಯನಾಥ್ ಅವರು ನಗರಕ್ಕೆ ಬಂದಿದ್ದರು.