ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ನೆರವು ನೀಡುವ ಅರ್ಜಿಯ ತಂತ್ರಾಂಶವನ್ನು ಮೂರು ದಿನಗಳೊಳಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.
‘ಆರ್ಥಿಕ ನೆರವು: ಕನ್ನಡಿಯೊಳಗಿನ ಗಂಟು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಶನಿವಾರ ವರದಿ ಪ್ರಕಟಿಸಿ, ಈ ನೆರವು ಪಡೆಯಲು ಬೇಕಾದ ಅರ್ಜಿಯನ್ನೇ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡದ ಕುರಿತು ಗಮನ ಸೆಳೆಯಲಾಗಿತ್ತು.
‘ಈ ವ್ಯವಸ್ಥೆ ಸಂಪೂರ್ಣ ಸಿದ್ಧವಾಗುತ್ತಿದ್ದಂತೆಯೇ ಮಾಹಿತಿ ನೀಡಲಾಗುವುದು. ಎಲ್ಲ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸ್ವೀಕರಿಸಲಾಗುತ್ತದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಶನಿವಾರ ತಿಳಿಸಿದ್ದಾರೆ.
‘ಸರ್ಕಾರ ಮತ್ತು ಫಲಾನುಭವಿಗಳ ನೇರ ಸಂಪರ್ಕದಲ್ಲಿ ನೆರವು ಪಾವತಿಸಲಾಗುತ್ತದೆ. ಯಾವುದೇ ಮಧ್ಯಂತರ ಸಂಪರ್ಕ ಇರಬಾರದು’ ಎಂದೂ ಅವರು ಹೇಳಿದ್ದಾರೆ.
ಷರತ್ತುಗಳೇನು ? ಅರ್ಜಿ ಸಲ್ಲಿಕೆ ಹೇಗೆ ?
* 2020ರ ಮಾರ್ಚ್ 24ರೊಳಗೆ ಚಾಲನಾ ಪರವಾನಗಿ ಹಾಗೂ ಸುಸ್ಥಿತಿ (ಫಿಟ್ನೆಸ್) ಪ್ರಮಾಣ ಪತ್ರ ಹೊಂದಿದ್ದ ವಾಹನಗಳಿಗೆ ಮಾತ್ರ ಅವಕಾಶ
* ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೋಂದಣಿ ಸಂಖ್ಯೆಯಲ್ಲಿ ಚಾಲಕರ ಮಾಹಿತಿ ಬೇರೆ ಬೇರೆಯಾಗಿರಬಾರದು
* ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಈ ನೆರವು ನೀಡಲಾಗುವುದಿಲ್ಲ
* ಅನುಜ್ಞಾ ಪತ್ರ ಹೊಂದಿರುವ ಚಾಲಕರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಸಂದಾಯ
* ಲಾಕ್ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪತ್ರ ನೀಡಬೇಕು