ಕಲಬುರ್ಗಿ: ‘ರಾಜ್ಯದ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನುಡಿದಂತೆ ನಡೆಯುತ್ತಿದೆ. ರೈತರ ಸಾಲಮನ್ನಾ ಮಾಡಿದ್ದು, ಸಾವಿರಾರು ಕೋಟಿ ಅವರಿಗೆತಲುಪಿದೆ. ಆದರೂ, ಪ್ರಧಾನಿ ನರೇಂದ್ರ ಮೋದಿ ನಿಮ್ಮ ನೆಲದಲ್ಲಿ ನಿಂತು ಹಸಿಸುಳ್ಳು ಹೇಳಿ ಹೋಗಿದ್ದಾರೆ’ ಎಂದುಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.
‘ಸುಳ್ಳು ಹೇಳುವ ಅವರ ಬದಲಾಗಿ ನುಡಿದಂತೆ ನಡೆಯುವ ನಮ್ಮನ್ನು ಬೆಂಬಲಿಸಿ’ ಎಂದು ಸೋಮವಾರ ಇಲ್ಲಿ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯಲ್ಲಿ ಮತದಾರರಿಗೆ ಮನವಿ ಮಾಡಿದರು.
‘ರಾಜ್ಯದಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಪ್ರತಿ ಬೂತ್ನಲ್ಲಿಯೂ ಹೋರಾಟ ನಡೆಸಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
‘ನಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೇಂದ್ರದಲ್ಲಿಯೂ ನಾವೇ ಅಧಿಕಾರಕ್ಕೆ ಬರಲಿದ್ದು, ರೈತರ ಸಾಲಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
‘ರೈತರ ಸಾಲಮನ್ನಾ ಆಗಿ, ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕು. ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ–ಆರೋಗ್ಯ ಸೌಲಭ್ಯ ಸಿಗಬೇಕು. ಆ ಮೂಲಕ ಸುಖೀ ಸಮಾಜ ನಿರ್ಮಾಣ ನಮ್ಮ ಕನಸು. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕೃಷಿ ಸಂಸ್ಕರಣ ಘಟಕಗಳು ಹಾಗೂ ಕೋಲ್ಡ್ ಸ್ಟೋರೇಜ್ಗಳ ಸ್ಥಾಪಿಸುತ್ತೇವೆ. ಸರ್ಕಾರಿಶಾಲಾ–ಕಾಲೇಜು ಮತ್ತು ಹೈಟೆಕ್ ಆಸ್ಪತ್ರೆಗಳ ಸ್ಥಾಪನೆಗೆ ಹೆಚ್ಚಿನ ಹಣ ವಿನಿಯೋಗ ಮಾಡುತ್ತೇವೆ’ಎಂದು ಎಂದು ವಾಗ್ದಾನ ಮಾಡಿದರು.
ಆದರೆ, ತಾವು ಖಾಸಗಿಯವರ ವಿರೋಧಿ ಅಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದರು.
‘ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೆ ತರುತ್ತೇವೆ. ಜಿಎಸ್ಟಿಯಿಂದ ಸಣ್ಣಪುಟ್ಟ ವರ್ತಕರಿಗೆ ಹಾನಿಯಾಗುತ್ತಿದ್ದು, ಅದನ್ನು ತಪ್ಪಿಸಲು ಸರಳೀಕೃತ ಮತ್ತು ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.
‘2009ರ ಲೋಕಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದಂತೆ ಸಂವಿಧಾನದ ಕಲಂ371 (ಜೆ) ಅಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ್ದೇವೆ. ಐದು ವರ್ಷಗಳಲ್ಲಿ ಈ ಭಾಗದವರಿಗೆ 30 ಸಾವಿರ ಜನರಿಗೆಉದ್ಯೋಗ ದೊರಕಿವೆ. ಪ್ರತಿ ವರ್ಷ 6 ಸಾವಿರ ಎಂಜಿನಿಯರಿಂಗ್, 800 ವೈದ್ಯಕೀಯ ಸೀಟುಗಳು ಸರ್ಕಾರಿ ಕೋಟಾದಡಿ ಸಿಗುತ್ತಿವೆ’ ಎಂದು ಸಾಧನೆಯ ಪಟ್ಟಿ ಮಾಡಿದರು.
ಮೋದಿ ನೀಡಿದ್ದ ಭರವಸೆಯಲ್ಲಿ ಒಂದಾದರೂ ಈಡೇರಿಸಿದ್ದಾರೆಯೇ ಎಂದುಪ್ರಶ್ನಿಸಿದರು.