ಬೆಂಗಳೂರು: ‘ಕಬ್ಬಿನ ಬಾಕಿ ಹಣ ಕೊಡಿಸದ ಅಧಿಕಾರಸ್ಥ ಜನಪ್ರತಿನಿಧಿಗಳು ಹಳ್ಳಿ ಪ್ರವೇಶಿಸದಂತೆ ನಿರ್ಬಂಧಿಸಿ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತರನ್ನು ಉದ್ದೇಶಿಸಿ ಹೇಳಿದರು.
ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ 15 ದಿನಗಳಲ್ಲಿ ಹಣ ಪಾವತಿಸಬೇಕು. ಆದರೆ, ನಾಲ್ಕೈದು ತಿಂಗಳುಗಳು ಕಳೆದರೂ ಸಕ್ಕರೆ ಕಾರ್ಖಾನೆಗಳು ಹಣ ನೀಡಿಲ್ಲ. ರಾಜ್ಯದ 65 ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ₹4,000 ಕೋಟಿ ಬಾಕಿ ಬರಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕೇಂದ್ರ ಸರ್ಕಾರ ಮೃದು ಸಾಲ ಘೋಷಣೆ ಮಾಡಿದೆ. ಈ ಹಣದಲ್ಲಿ ರೈತರ ಬಾಕಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಆದರೂ, ಬಾಕಿ ಹಣ ಪಾವತಿಯಾಗಿಲ್ಲ. ಅಧಿಕಾರಸ್ಥ ಜನಪ್ರತಿನಿಧಿಗಳು ಈ ಬಗ್ಗೆ ಕಿಂಚಿತ್ತು ಮಾತನಾಡಿಲ್ಲ. ಈಗ ಅವರು ಚುನಾವಣಾ ಪ್ರಚಾರಕ್ಕೆ ಬಂದರೆ ರೈತರು ಹಳ್ಳಿಗಳಿಗೆ ಪ್ರವೇಶ ನೀಡಬಾರದು ಎಂದು ಮನವಿ ಮಾಡಿದರು.
156 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿದ್ದು, ಜನರು ಗುಳೆ ಹೋಗುವ ಸ್ಥಿತಿ ಇದೆ. ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ. ಇದೆಲ್ಲವನ್ನೂ ಮರೆತು ಹಣ, ಜಾತಿ, ತೋಳ್ಬಲ ಬಳಸಿ ಚುನಾವಣಾ ಪ್ರಚಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಆಕರ್ಷಕವಾದ ಪ್ರಣಾಳಿಕೆ ಹೊರಡಿಸುವ ರಾಜಕೀಯ ಪಕ್ಷಗಳು ಮತದಾರರನ್ನು ವಂಚಿಸುತ್ತಿವೆ. ಈ ರೀತಿಯ ಪಕ್ಷಗಳನ್ನು ಚುನಾವಣೆಯಿಂದ ನಿಷೇಧಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.