ನಿಪ್ಪಾಣಿ (ಬೆಳಗಾವಿ): ಸಿಕ್ಕಿಂನ ಗ್ಯಾಂಗ್ಟಕ್ನಲ್ಲಿ ಸೋಮವಾರ ಬೆಳಿಗ್ಗೆ ಕರ್ತವ್ಯನಿರತರಾಗಿದ್ದ ವೇಳೆ ಗುಡ್ಡ ಕುಸಿದು ತಾಲ್ಲೂಕಿನ ಆಡಿ ಗ್ರಾಮದ ಯೋಧ ರೋಹಿತ ಸುನೀಲ ದೇವರ್ಡೆ (25) ಸಾವಿಗೀಡಾಗಿದ್ದಾರೆ.
ಅವರಿಗೆ ತಾಯಿ ಹಾಗೂ ಅಣ್ಣ ಇದ್ದಾರೆ.
ಮಹಾರಾಷ್ಟ್ರದ ಇಚಲಕರಂಜಿಯವರಾದ ಅವರು, ಆಡಿಯಲ್ಲಿರುವ ಮಾವನ ಮನೆಯಲ್ಲಿದ್ದರು. ಏಳು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು.
ಜ.9ಕ್ಕೆ ರಜೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ರಜೆ ಮುಂದೂಡಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತು.
‘ಪಾರ್ಥಿವ ಶರೀರವನ್ನು ಯಾವಾಗ ತರಲಾಗುತ್ತದೆ ಎಂಬುದರ ಕುರಿತು ನಿಖರ ಮಾಹಿತಿ ಇನ್ನೂ ಬಂದಿಲ್ಲ’ ಎಂದು ತಹಶೀಲ್ದಾರ್ ಮಹಾದೇವ ಬಾಣಸಿ ತಿಳಿಸಿದರು.