ಬೆಂಗಳೂರು: ನಗರದ ದಕ್ಷಿಣ ವಿಭಾಗದ ಡಿಸಿಪಿ ಆಗಿ ಖಡಕ್ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.
ಬೆಳಿಗ್ಗೆ ಕಚೇರಿಗೆ ಬಂದಿದ್ದ ಅಣ್ಣಾಮಲೈ ಅವರಿಗೆ ನಿರ್ಗಮಿತ ಡಿಸಿಪಿ ಎಸ್.ಡಿ.ಶರಣಪ್ಪ ಅವರು ಅಧಿಕಾರ ಹಸ್ತಾಂತರಿಸಿದರು. ವಿಭಾಗದ ಬಗ್ಗೆ ಮಾಹಿತಿ ಹಂಚಿಕೊಂಡರು.
ಚಿಕ್ಕಮಗಳೂರು ಎಸ್ಪಿ ಆಗಿದ್ದ ಅಣ್ಣಾಮಲೈ ಅವರನ್ನು ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿತ್ತು. ಮೂರು ದಿನಗಳ ನಂತರ ಅವರು ನಗರಕ್ಕೆ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ವಹಿಸಿಕೊಂಡ ಮೊದಲ ದಿನವೇ ತಮ್ಮ ವಿಭಾಗ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ವಿಭಾಗ ವ್ಯಾಪ್ತಿಯಲ್ಲಾದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇತ್ತೀಚೆಗಷ್ಟೇ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಆಗಿ ಅಲೋಕ್ಕುಮಾರ್ ಹಾಗೂ ಡಿಸಿಪಿ ಆಗಿ ಗಿರೀಶ್ ಬಂದಿದ್ದರು. ಈಗ ಮತ್ತೊಬ್ಬ ಖಡಕ್ ಅಧಿಕಾರಿ ಅಣ್ಣಾಮಲೈ ಸಹ ಬೆಂಗಳೂರಿಗೆ ಬಂದಿದ್ದಾರೆ.