ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಅಕ್ರಮ: 59 ಎಪಿಪಿಗಳ ಅಮಾನತು, ಹೆಸರು

ಲೋಕಾಯುಕ್ತ ಪೊಲೀಸರ ಶಿಫಾರಸಿಗೆ ಎರಡು ವರ್ಷಗಳ ಬಳಿಕ ಮನ್ನಣೆ
Last Updated 21 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಅಭಿಯೋಗ ಇಲಾಖೆಗೆ ಅಕ್ರಮವಾಗಿ ನೇಮಕಗೊಂಡ ಆರೋಪಕ್ಕೆ ಒಳಗಾಗಿರುವ 59 ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರನ್ನು (ಎಎಪಿ) ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2013–14ನೇ ಸಾಲಿನ ಎಪಿಪಿ ನೇಮಕಾತಿ ಪರೀಕ್ಷೆ ಅಕ್ರಮ ಕುರಿತು ದೂರು ದಾಖಲಿಸಿಕೊಂಡಿದ್ದ ಇಲ್ಲಿನ 23ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು.

‘ಉತ್ತರಪತ್ರಿಕೆಗಳ ಮೌಲ್ಯಮಾಪನದ ಬಳಿಕ ಅಂಕಗಳನ್ನು ತಿದ್ದಲಾಗಿದೆ’ ಎಂದು ದೃಢಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ನೀಡಿದ ವರದಿ ಹಾಗೂ ಮೌಲ್ಯಮಾಪಕರು ಮತ್ತು ಪರೀಕ್ಷಾ ಮೇಲ್ವಿಚಾರಕರ ಹೇಳಿಕೆ ಆಧರಿಸಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಿದ್ದ ಲೋಕಾಯುಕ್ತ ಪೊಲೀಸರು, ಎಎಪಿಗಳ ಅಮಾನತಿಗೆ ಶಿಫಾರಸು ಮಾಡಿದ್ದರು.

ಎರಡು ವರ್ಷಗಳ ಬಳಿಕ ಈ ಶಿಫಾರಸು ಒಪ್ಪಿಕೊಂಡ ಸರ್ಕಾರ ಅಮಾನತು ಆದೇಶ ಹೊರಡಿಸಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ವಿಚಾರಣೆಯನ್ನು ಬಾಕಿ ಉಳಿಸಿ, ನಾಗರಿಕ ಸೇವಾ ನಿಯಮಾವಳಿಯ ನಿಯಮ 10 (1)(ಸಿ) ಮತ್ತು (ಡಿ) ಅಡಿ 59 ಜನರನ್ನು ಸೇವೆಯಿಂದ ಅಮಾನತು ಮಾಡಿದೆ.

ಈ ತಂಡದಲ್ಲಿ ಒಟ್ಟು 61 ಎಎಪಿಗಳು ನೇಮಕಗೊಂಡಿದ್ದರು. ಈ ಪೈಕಿ ಒಬ್ಬರು ಭ್ರಷ್ಟಾಚಾರ ಆರೋಪದ ಮೇಲೆ ಈಗಾಗಲೇ ಸಸ್ಪೆಂಡ್‌ ಆಗಿದ್ದಾರೆ. ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

‘ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿದ್ದ ನೈಜ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಲಾಗಿದೆ. ಅಭ್ಯರ್ಥಿಗಳಿಂದ ಬದಲಿ ಉತ್ತರ ಬರೆಯಿಸಿ ನಕಲಿ ಮೌಲ್ಯಮಾಪನ ಮಾಡಿಸಲಾಗಿದೆ. ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರ ನಿರ್ದೇಶಕರಾಗಿದ್ದ ಚಂದ್ರಶೇಖರ ಜಿ. ಹಿರೇಮಠ ಮತ್ತು ಆಡಳಿತಾಧಿಕಾರಿ ಮತ್ತು ಎಚ್‌ಕ್ಯೂಎ (ಪ್ರಭಾರ) ಅವರ ಜತೆ ಅಭ್ಯರ್ಥಿಗಳು ಶಾಮೀಲಾಗಿ ಒಳಸಂಚು ರೂಪಿಸಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಆಗಿದ್ದ ಸಂಜಯ್‌ ಸಹಾಯ್‌, 2018ರ ಮಾರ್ಚ್‌ 27ರಿಂದ ನಾಲ್ಕು ಪತ್ರಗಳನ್ನು ಗೃಹ ಇಲಾಖೆಗೆ ಬರೆದಿದ್ದರು.‘ಅಕ್ರಮವೆಸಗಿ ನೇಮಕವಾದ ಎಪಿಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕ್ರಿಮಿನಲ್‌ ಮೊಕದ್ದಮೆ ಹೂಡಲು ನಾಗರಿಕ ಸೇವಾ ನಿಯಮ 20ರಲ್ಲಿ ಅವಕಾಶವಿದೆ’ ಎಂದು ಪತ್ರದಲ್ಲಿ ಹೇಳಿದ್ದರು.

ಆದರೆ, ‘ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಪಿಪಿಗಳನ್ನು ಸಸ್ಪೆಂಡ್‌ ಮಾಡಿದರೆ ಜನರಿಗೆ ತೊಂದರೆ ಆಗಲಿದೆ. ಅಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮ 10ರ ಅಡಿ ಅಮಾನತಿಗೆ ಅವಕಾಶ ಇಲ್ಲ’ ಎಂದು ಹೇಳಿ ಸರ್ಕಾರ ನುಣುಚಿಕೊಂಡಿತ್ತು. ಹೀಗಾಗಿ, ಅಮಾನತು ಆದೇಶ ಹೊರಡಿಸುವುದು ತಡ ಆಗಿತ್ತು.

ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿವೆ ಎಂದು ಆರೋಪಿಸಿ ತೀರ್ಥಹಳ್ಳಿ ವಕೀಲ ಎಚ್‌.ಟಿ.ರವಿ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.

ಮೇಲ್ನೋಟಕ್ಕೆ ಅಕ್ರಮ ಸಾಬೀತು

ಮೂಲ ಅಂಕಗಳನ್ನು ತಿದ್ದಿದ ಆರೋಪ

ಅಭಿಯೋಗ ಇಲಾಖೆ ಅಧಿಕಾರಿಗಳು ಶಾಮೀಲು

ಅಮಾನತುಗೊಂಡವರು

ಮಹಮ್ಮದ್‌ ಅಜ್ಮಲ್‌ ಪಾಷಾ (ಮಧುಗಿರಿ), ಸಿ.ಜೆ. ಸುಬ್ರಮಣ್ಯ (ದೊಡ್ಡಬಳ್ಳಾಪುರ), ಶಿವನಂಜಪ್ಪ (ಶ್ರೀರಂಗಪಟ್ಟಣ), ಗೀತಾ ಸಿದ್ದರಾಮಪ್ಪ ಅಸೂಟಿ (ಧಾರವಾಡ), ತ್ರಿಶೂಲ ಸುಭಾಷ್‌ಚಂದ್ರ ಜೈನ್‌ (ಕನಕಪುರ), ಕುಮುದಿನಿ ಎಸ್‌. (ಶಿಡ್ಲಘಟ್ಟ), ಮಾಯಣ್ಣಗೌಡ (ಹಾಸನ), ವೀರೇಂದ್ರ ಪಾಟೀಲ ಬಿ. (ಚಿತ್ರದುರ್ಗ), ರೂಪಾ ಎ.ಟಿ. ದೇವನಹಳ್ಳಿ, ಸುಮಂಗಲಾ ಚಂದ್ರಶೇಖರ ನಾಯಕ್‌ (ಕುಂದಾಪುರ), ರವೀಂದ್ರ ಸಾ (ಹುಬ್ಬಳ್ಳಿ), ಚೇತನ್ ತುಕಾರಾಂ ನಾಯಕ್‌ (ಮಂಗಳೂರು), ಗುರುಸ್ವಾಮಿ (ಚಿಕ್ಕಬಳ್ಳಾಪುರ), ಸಾಹೇಬ್‌ಗೌಡ ಪಾಟೀಲ (ಚಿತ್ತಾಪುರ), ವೆಂಕಟೇಶ್‌ ಎಸ್‌.ಎನ್‌ (ಆನೇಕಲ್‌), ಎನ್‌. ಕುಮಾರ್‌ (ಚಳ್ಳಕೆರೆ), ರೇಖಾ ಟಿ. (ಹುಣಸೂರು), ಜ್ಞಾನಮೂರ್ತಿ ಬಿ.ವಿ. (ಚನ್ನರಾಯ ಪಟ್ಟಣ), ಎಂ.ಎಲ್‌.ಚಂದ್ರಾರೆಡ್ಡಿ (ಹೊಸಕೋಟೆ), ಶ್ರೀರೂಪಾ (ಮಾಲೂರು), ರಘು ಕೆ.ಎಂ. (ತುಮಕೂರು) ಯಶೋಧಾ ಎಚ್.ಆರ್‌. (ಮಾಗಡಿ), ಸುನಿಲ್‌ ಪಾಟೀಲ (ಮೂಡಿಗೆರೆ), ಪುಷ್ಪಾವತಿ (ಬೆಂಗಳೂರು), ಬಸಲಿಂಗಪ್ಪ ಬಾಲಗೊಂಡ ಬೋರ್ಗಲ್‌ (ಅಥಣಿ), ಶಿಲ್ಪಾ ಜೋಷಿ (ಮೂಡಲಗಿ), ಕೆ. ಹರೀಶ್‌ (ಚನ್ನರಾಯಪಟ್ಟಣ), ಅನೂರಾಧ ಎನ್‌. (ಮಾಲೂರು), ನಾರಾಯಣ ಎಂ. ಹುಣಸೂರು, ಹೃಷಿಕೇಶ ಸಿ. (ಹೊಸಕೋಟೆ), ಸರೋಜಿನಿ ವೀರಪ್ಪ ಬಟಕುರ್ಕಿ (ಬೀಳಗಿ), ಮಹಮ್ಮದ್‌ ಖಾಜ (ಬಂಗಾರಪೇಟೆ), ಎಂ.ಕೆ. ವಿಜಯಕುಮಾರ್‌ (ರಾಮನಗರ), ರವೀಂದ್ರ ಎಚ್‌.ಸಿ. (ಮೈಸೂರು), ಶಿವಮ್ಮ ಎಚ್‌.ವಿ. (ತಿಪಟೂರು), ಮಮತಾ ಎಸ್‌.ಎನ್‌. (ಅರಕಲಗೂಡು), ಧೀರೇಂದ್ರ (ಬೆಳಗಾವಿ), ಧನಪಾಲ್‌ ದೇವಪ್ಪ ಹಾರೋಗೇರಿ (ಬೆಳಗಾವಿ), ವಿನಾಯಕ ಎಸ್‌. ಪಾಟೀಲ (ಹುಬ್ಬಳ್ಳಿ), ಸಂಗನಗೌಡ ಪಿ. ನಾಯಕ್‌ (ಬದಾಮಿ), ಎಲ್‌.ರೂಪಾ (ಚನ್ನಪಟ್ಟಣ), ವಿಮಲಾ ಟಿ.ಎಂ. (ಬೆಂಗಳೂರು), ರಾಜಣ್ಣ ಎ.ಎನ್‌. (ಗುಂಡ್ಲುಪೇಟೆ), ಕುಮಾರಿ ರಾಖಿ ಟಿ. (ಗುಬ್ಬಿ), ದಾದಾಫೀರ್‌ ಶಬ್ಬೀರ್‌ ಅಹಮದ್‌ ಭನುವಳ್ಳಿ (ಶಿಕಾರಿಪುರ), ಛಾಯಾದೇವಿ (ಕಲಬುರ್ಗಿ), ಜ್ಞಾನೇಂದ್ರ ಕೆ.ಪಿ. (ನಾಗಮಂಗಲ), ವೇಣುಕುಮಾರ್‌ ಎ.ಎಸ್‌. (ಚಿಂತಾಮಣಿ), ಶೇಖ್‌ ಮಹಮದ್‌ ಅಲಿ ಡಿ.ಎಸ್‌. (ಕೊರಟಗೆರೆ), ವಿಜಯಚಂದ್ರ ಪ್ರಭು ಬಿ.ವಿ. (ಗಂಗಾವತಿ), ಭರತ್‌ ಭುಜಬಲಿ ಶಿರಹಟ್ಟಿ (ವಿಜಯಪುರ), ಶ್ರೀನಿವಾಸ ಎಂ. (ಬಂಗಾರಪೇಟೆ), ಲಿಂಗೇಶ್ವರ ಜೆ. (ಚಳ್ಳಕೆರೆ) ಮೋಹನ ಬಿ. (ಮಧುಗಿರಿ), ನಾಗಭೂಷಣ ಕೆ.ಆರ್. (ದೊಡ್ಡಬಳ್ಳಾಪುರ) ವಿಜಯಲಕ್ಷ್ಮಿ ಅಥರ್ಗ (ಬೀಳಗಿ), ಮೋಹನ್‌ ವೈ.ಎಸ್‌. (ಆನೇಕಲ್‌) ಬಿ. ನಾರಾಯಣಸ್ವಾಮಿ (ಕನಕಪುರ), ರಂಜನಾ ಸುರೇಶ್‌ಪಾಟೀಲ (ಬೈಲಹೊಂಗಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT